fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಮಂಗಳವಾರ, ಜೂನ್ 21, 2016

ಅಂತಾರಾಷ್ಟ್ರೀಯ ಯೋಗ ದಿನ




ಓಂ ಅಸತೋಮ ಸದ್ಗಮಯ |


 ತಮಸೋಯ ಜ್ಯೋತಿರ್ಗಮಯ |


ಮೃತ್ಯೋರ್ಮಾ ಅಮೃಂತಂಗಮಯ |


 ಓಂ ಶಾಂತಿ ಶಾಂತಿ ಶಾಂತಿ : ||
        
      ಅಸತ್ಯದಿಂದ ಸತ್ಯದೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ, ಮೃತ್ಯುವಿನಿಂದ ಅಮರತ್ವದ ಕಡೆಗೆ,ಸಾಗಲಿ ಜೀವನ ಮತ್ತು ಎಲ್ಲರಿಗೂ ಶಾಂತಿ ಲಭಿಸಲಿ ಎಂಬ ಸಂದೇಶ ವೇದಗಳಿಂದ ಬಂದಿದೆ. ಹೀಗೆ ಸಾಗುವುದೇ ಅರ್ಥಪೂರ್ಣ ಜೀವನವಲ್ಲವೇ ?
 ಸೃಷ್ಠಿಯ ಆರಂಭದಲ್ಲಿ ಕತ್ತಲೆ ಮಾತ್ರವಿದ್ದು, ಎಲ್ಲೆಲ್ಲೂ ಕತ್ತಲೆಯೇ ಆವರಿಸಿಕೊಂಡಿದ್ದು ನಂತರ ಜಗತ್ತಿಗೆ  ಬೆಳಕು  ಆಗಮಿಸಿ ಓಂಕಾರದ ನಾದ ಹೊಮ್ಮಿತು. ಹೀಗೆ ನಾದದ ಮೂಲಕ ವೇದದ ಆರಂಭವಾಯಿತು. ವೇದಗಳೇ ವಿಶ್ವದ ಪ್ರಥಮ  ಐತಿಹಾಸಿಕ ಮತ್ತು ಲಿಖಿತ ಸಾಹಿತ್ಯದ ದಾಖಲೆಗಳು. ವೇದಗಳು ನಮ್ಮಧರ್ಮದ ಮೂಲವೆನ್ನುತ್ತಾರೆ.  ನಾಲ್ಕು ವೇದಗಳೆಂದರೆ - ಋಗ್ವೇದ, ಯಜುರ್ವೇದ, ಸಾಮವೇದ, ಆಥರ್ವಣ ವೇದ. ಇದರಲ್ಲಿ ಪ್ರತಿಯೊಂದರಲ್ಲಿ ನಾಲ್ಕು ಭಾಗಗಳಿವೆ. ನಂತರ ಹೊರ ಬಂದದ್ದು  ಅಷ್ಟಾಂಗ ಯೋಗ.  ಯೋಗ - ಅಷ್ಟಾಂಗ ಯೋಗದ ಮೂರನೆಯ ಹಂತವಾಗಿದೆ. ಅಷ್ಟಾಂಗ ಯೋಗದಲ್ಲಿರುವ ಎಂಟು ಅಂಗಗಳೆಂದರೆ- ಯಮ, ನಿಯಮ, ಆಸನ, ಪ್ರಾಣಾಯಾಮ,ಪ್ರತ್ಯಾಹಾರ, ಧಾರಣ, ಧ್ಯಾನ,ಮತ್ತು ಸಮಾಧಿ ಎಂದು ಯೋಗ ಸೂತ್ರಕಾರರಾದ ಪತಂಜಲಿ ಮುನಿಗಳು ತಿಳಿಸಿದ್ದಾರೆ.
           ಉತ್ತಮ ಆರೋಗ್ಯ ಯಾರಿಗೆ ತಾನೇ ಬೇಡ?  ಇದಕ್ಕಾಗಿ ನಮ್ಮ ಪೂರ್ವಜರು ವಿವಿಧ ರೀತಿಯಲ್ಲಿ ತಮ್ಮ ಆರೋಗ್ಯ ರಕ್ಷಣೆ ಮಾಡಿಕೊಳ್ಳುತ್ತಿದ್ದರು. ಇದರಲ್ಲಿ ನಮ್ಮನ್ನು ನಾವೇ ಮಾನಸಿಕ ಹಾಗೂ ಶಾರೀರಿಕವಾಗಿ  ಸರಿಪಡಿಸಿಕೊಳ್ಳುವ ಮಾರ್ಗದಲ್ಲಿ ಯೋಗವಿದ್ಯೆಯೂ ಒಂದು.  ಮೂಲತ: ಭಾರತದ ಕೊಡುಗೆಯಾದ ಯೋಗ - ವಿಶ್ವದಲ್ಲೇ ಅತ್ಯಂತ ಪ್ರಾಚೀನವಾದುದು. ಸುಮಾರು 5,000 ವರ್ಷಗಳಿಗೂ ಹಿಂದಿನ ವಿದ್ಯೆಯಾಗಿದ್ದು ಮಂತ್ರಗಳ ಮೂಲಕ  ಋಗ್ವೇದದಲ್ಲಿ  ಪರಿಚಯಿಸಲ್ಪಟ್ಟಿದೆ. ನಂತರ ಉಪನಿಷತ್ತುಗಳಲ್ಲಿ ಸ್ವಲ್ಪ ಸುಧಾರಿತ ರೂಪದಲ್ಲಿ ದಾಖಲಾಗಿದೆ. ಯೋಗಕ್ಕೆ  ಯೋಗಸೂತ್ರಗಳ ಮೂಲಕ ಸರಿಯಾದ ರೂಪ ನೀಡಿದವರು ಯೋಗ ಪಿತಾಮಹ ರೆಂದು ಕರೆಯಲ್ಪಡುವ ಪತಂಜಲಿ ಮಹರ್ಷಿಗಳು. ಯೋಗ ಸೂತ್ರಗಳನ್ನು ಪತಂಜಲಿ ಮುನಿ 2 ನೇ ಶತಮಾನದಲ್ಲಿ ರಚಿಸಿದ್ದು ಇದರಲ್ಲಿ ಮುಖ್ಯವಾಗಿ ಜ್ಞಾನ ಯೋಗ, ಭಕ್ತಿ ಯೋಗ, ಕರ್ಮಯೋಗ, ರಾಜಯೋಗ , ಹಠಯೋಗ,  ಮಂತ್ರಯೋಗ, ಶಿವಯೋಗ, ನಾದ ಯೋಗ, ಲಯ ಯೋಗ,..ಮೊದಲಾದ ಯೋಗ ಪಥಗಳಿವೆ. ಇದರಲ್ಲಿ ಹಠ ಯೋಗ  ಉತ್ತಮ ಆರೋಗ್ಯಕ್ಕೆ ರಹದಾರಿಯಿದ್ದಂತೆ. ಇದು  ಪಂಚಧಾತುಗಳಿಂದ  ರಚಿತವಾಗಿರುವ, ಸಣ್ಣ ವಿಶ್ವವೇ ಆಗಿರುವ ನಮ್ಮ ದೇಹವನ್ನು  ಮತ್ತು ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಮತ್ತು   ಎಲ್ಲ ರೀತಿಯ ಕಾಯಿಲೆಗಳಿಂದ ಮುಕ್ತಿಗೊಳಿಸಲು ಸಹಕಾರಿಯಾಗಿದೆ.
            ‘ ಯೋಗ ಕರ್ಮಸು ಕೌಶಲಂ ‘ ಎಂದು ಭಗವದ್ಗೀತೆ ತಿಳಿಸುತ್ತದೆ.ಅಂದರೆ ಯಾವುದೇ ಕೆಲಸವನ್ನು ಕುಶಲತೆಯಿಂದ ಯಶಸ್ವಿಯಾಗಿ ನಿರ್ವಹಿಸುವುದೂ ಯೋಗವೇ. ಹಾಗೆಯೇ ‘ಸಮತ್ವಂ ಯೋಗ ಮುಚ್ಯತೇ’ – ಎಲ್ಲವನ್ನೂ ಸಮಾನವಾಗಿ ಸ್ವೀಕರಿಸುವ ಮನಸ್ಥಿತಿಯೂ ಯೋಗ ಎಂದು ಗೀತೆಯಲ್ಲಿದೆ. ‘ಯೋಗ’ ಯುಜ್ ‘ (ಅರ್ಥ ಸೇರಿಸು) ಎಂಬ ಸಂಸ್ಕೃತ ಧಾತುವಿನಿಂದ  ಉಂಟಾಗಿದೆ. ಯೋಗವೆಂದರೆ ಮನಸ್ಸು ಮತ್ತು ಶರೀರಗಳ ಒಂದುಗೂಡುವಿಕೆ.  ಸ್ವಸ್ಥ ಸದೃಢ ಶರೀರ ಮನಸ್ಸು ಮತ್ತು ಏಕಾಗ್ರ ಚಿತ್ತವಿದ್ದರೆ ಏನನ್ನೂ ಸಾಧಿಸಲು ಸಾಧ್ಯ. ಪತಂಜಲಿ ಮುನಿಗಳು ತಿಳಿಸಿರುವ ಎಂಟು ಅಂಗಗಳೂ ಇದಕ್ಕೆ ಅವಶ್ಯಕ. 1. ಯಮ –ನಡವಳಿಕೆಗಳು, 2. ನಿಯಮ - ಕ್ರಮಬದ್ಧತೆ,ಶಿಸ್ತು, ಜೀವನ ಮೌಲ್ಯಗಳು, 3. ಆಸನ - ದೇಹದ ಭಂಗಿ/ನಿಲುವು 4. ಪ್ರಾಣಾಯಾಮ -  ಉಸಿರಾಟದ ನಿಯಂತ್ರಣ , 5. ಪ್ರತ್ಯಾಹಾರ - ಇಂದ್ರಿಯ ನಿಗ್ರಹ 6. ಧಾರಣ - ಮನಸ್ಸಿನ ಏಕಾಗ್ರತೆ ಆಲೋಚನೆಗಳ ಹಿಡಿತ 7. ಧ್ಯಾನ –ಏಕಾಗ್ರ ಚಿತ್ತದಿಂದ ಚಿಂತನೆ, ಯಾವುದೇ ಮಗ್ನತೆ, ಧ್ಯಾನಿಸುವ ಸ್ಥಿತಿ  8. ಸಮಾಧಿ – ತಲ್ಲೀನತೆ, ಧ್ಯಾನದಿಂದ ಭಾವ ಪರವಶ ಸ್ಥಿತಿ,
             ‘ ಪ್ರತಿ ಜೀವಿಯೂ ಮೂಲತ: ದಿವ್ಯವೇ ’ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ನಮ್ಮ ಶರೀರದ ಒಳಗೆ ಮತ್ತು ಹೊರಗೆ ಸುಪ್ತವಾಗಿರುವ ದಿವ್ಯತ್ವವನ್ನು ಜಾಗೃತಗೊಳಿಸಿ ಬದುಕ ಬೇಕು.  . ಇದಕ್ಕೆ ಯಾವುದಾದರೂ ಯೋಗ ಮಾರ್ಗವನ್ನು  ( ಅಥವಾ ಎಲ್ಲ ) ಬಳಸಿ ಗುರಿ ಸಾಧಿಸಿ ಮುಕ್ತಿ ಪಡೆಯಿರಿ ಎಂದೂ ಅವರು ಹೇಳಿದ್ದಾರೆ. ಮಹರ್ಷಿ ಅರವಿಂದರು ನಮ್ಮೊಳಗಿನ ದಿವ್ಯತ್ವವನ್ನು ಅಭಿವ್ಯಕ್ತಗೋಳಿಸಿ ಆತ್ಮ ಸಾಕ್ಷಾತ್ಕಾರದತ್ತ ಮುನ್ನಡೆಯಲು ಇರುವ ವ್ಯವಸ್ಥಿತ ಮಾರ್ಗವೇ ಯೋಗ ಎಂದಿದ್ದಾರೆ.ಮಾನವನನ್ನು ಹಂತಹಂತವಾಗಿ  ಉತ್ತಮವಾಗಿ ಪರಿವರ್ತಿಸಿ ಮಹಾ ಮಾನವ, ದೇವ ಮಾನವನನ್ನಾಗಿ ಮಾಡುವ ವೈಜ್ಞಾನಿಕತೆಯೇ ಯೋಗ.
               ಯೋಗದ ಅಂಶಗಳು ನಮ್ಮ ಜೀವನದ ಅವಿಭಾಜ್ಯ  ಅಂಗವೂ ಹೌದು. ಪ್ರಾರ್ಥನೆ,ಉಸಿರಾಟ, ಭಂಗಿಗಳು ಇತ್ಯಾದಿ. ಆದರೆ ಯಾವುದನ್ನು ಹೇಗೆ ವ್ಯವಸ್ಥಿತವಾಗಿ ಮಾಡುವುದು  ಎಂದು ಯೋಗ ತಿಳಿಸುತ್ತದೆ. ಒಟ್ಟಿನಲ್ಲಿ ಪ್ರಕೃತಿಯಿಂದ ಪ್ರೇರಣೆ ಪಡೆದು ರಚಿಸಿದ ಶಾಸ್ತ್ರವೇ ಯೋಗದ ಮೂಲ.
      ಯೋಗಾಸನಗಳಲ್ಲಿ ಪ್ರಕೃತಿಯಲ್ಲಿ ಇರುವ ಮೃಗ-ಪಕ್ಷಿಗಳ  ಭಂಗಿಯನ್ನು ಆಧರಿಸಿಯೇ ಆಸನಗಳನ್ನು ರಚಿಸಿ,ಹೆಸರಿಸಲಾಗಿದೆ.. ಹಾಗೇ ಮರಗಳ ,ಋಷಿಗಳ ಹೆಸರಿನ, ಆಸನಗಳೂ ಇವೆ. ಮುಖ್ಯವಾಗಿ 84 ಆಸನಗಳಿವೆ ಎಂದು ಹೇಳಲಾಗಿದೆ.  ಆಸನಾನಿ ಸಮಸ್ತಾನಿ ಯಾವಂತು ಜೀವ ಜಂತವ: ಎಂದು ಘೇರಂಡ ಸಂಹಿತೆಯಲ್ಲಿ ಸೂಚಿಸಲಾಗಿದೆ. ಸೃಷ್ಟಿಯಲ್ಲಿರುವ ಎಲ್ಲಾ ಜೀವಿಗಳಷ್ಟೂ ಆಸನಗಳಿವೆ ಎನ್ನಲಾಗಿದೆ. ಸೂರ್ಯ ನಮಸ್ಕಾರವು ಯೋಗಾಸನ ಮತ್ತು ಪ್ರಾಣಾಯಾಮಗಳನ್ನೊಳಗೊಂಡಿದ್ದು ಅತ್ಯಂತ ಪರಿಣಾಮಕಾರಿಯಾಗಿದೆ.
          ಯೋಗಾಭ್ಯಾಸದಿಂದ  ಆಗುವ ಪ್ರಯೋಜನಗಳು ಅನೇಕ.ನಿರತಂರ ಯೋಗಾಭ್ಯಾಸದಿಂದ ನರಮಂಡಲದ ಸಾಮರ್ಥ್ಯ ಹೆಚ್ಚಿ ದೇಹ ಉತ್ತಮವಾಗಿ ಕಾರ್ಯವೆಸಗುತ್ತದೆ.ಶರೀರದಲ್ಲಿರುವ ಕಲುಷಿತ  ವಸ್ತುಗಳು, ತ್ಯಾಜ್ಯಗಳೂ ಹೊರಹಾಕಲ್ಪಟ್ಟು  ಆರೋಗ್ಯ ಸುಧಾರಿಸುತ್ತದೆ. ಜ್ಞಾಪಕ ಶಕ್ತಿ ವೃದ್ಧಿಸುತ್ತದೆ. ರಕ್ತ ಪರಿಚಲನೆ ಸರಿಯಾಗುತ್ತದೆ. ಪಾಚಕಾಂಗಗಳು  ಸಮರ್ಥವಾಗಿ ಕೆಲಸ ಮಾಡಲು ಸಹಕಾರಿ. ಹೃದಯ,ಶ್ವಾಸಕೋಶ, ಕಿಡ್ನಿ,ಮೆದುಳು,ದೇಹದ ಎಲ್ಲ ಪ್ರಮುಖ ಅಂಗಗಳು ಸುಸ್ಥಿತಿಯಲ್ಲಿರುತ್ತವೆ.  ವಾಗುತ್ತವೆ. ಮಾನಸಿಕ ಸಂತೋಷ ಹೆಚ್ಚುತ್ತದೆ. ದೇಹಕ್ಕೆ,ಮನಸ್ಸಿಗೆ  ವಿಶ್ರಾಂತಿ ದೊರೆತಾಗ ಹೆಚ್ಚಿನ ಸಾಧನೆ ಸಾಧ್ಯವಾಗುತ್ತದೆ.
          ಬೆಳಿಗ್ಗೆ ಬೇಗನೇ ಎದ್ದು ಯೋಗಾಭ್ಯಾಸ ಮಾಡುವುದರಿಂದ ವಿದ್ಯಾರ್ಥಿಗಳಿಗೆ  ಶಿಸ್ತಿನ ಜೀವನ ನಡೆಸಲು , ಏಕಾಗ್ರತೆ ಹೊಂದಲು  ಕಷ್ಟವಾಗದು.  ಹದಿಹರೆಯದವರಿಗೆ, ಮಹಿಳೆಯರಿಗೆ , ಯೋಗ ಒಂದು ವರದಾನವಿದ್ದಂತೆ. ಜೀವನದ ವಿವಿಧ ಹಂತಗಳಲ್ಲಿ ಸಮರ್ಥವಾಗಿ ಎಲ್ಲ ದೈಹಿಕ ,ಮಾನಸಿಕ ತೊಂದರೆಗಳಿಂದ ಗುಣ ಹೊಂದಬಹುದು. ವಿದೇಶೀಯರೂ ಯೋಗಾಭ್ಯಾಸದಿಂದ ಆಕರ್ಷಿತರಾಗಿ ಎಲ್ಲ ದೇಶಗಳಲ್ಲೂ ಅನುಸರಿಸುತ್ತಿದ್ದಾರೆ. ಪ್ರತಿಯೊಂದು ಆಸನವೂ,ಪ್ರಾಣಾಯಾಮವೂ  ಲಾಭಕಾರಿಯಾಗಿದ್ದು ಚಿಕಿತ್ಸೆಯಾಗಿ ಪರಿಣಾಮಕಾರಿಯಾಗಿದೆ. ದೇಹದ ಎಲ್ಲ ವ್ಯಾಧಿಗಳಿಗೆ ಯೋಗ ಯಾವುದೇ ಅಡ್ಡ ಪರಿಣಾಮವಿಲ್ಲದ ಸುಲಭ ಚಿಕಿತ್ಸೆಯಾಗಿದೆ. ಆದರೆ ಯೋಗ ನಿರಂತರ ನಮ್ಮ ಜೀವನ ಶೈಲಿಯಾಗಬೇಕು. ಯಾರಿಗೆ ಎಷ್ಟು ಅಗತ್ಯವೋ ಅದನ್ನು ನಿರ್ಣಯಿಸಲು,ಕಲಿಸಲು ಪ್ರಸಿದ್ಧ ಯೋಗ ಕೇಂದ್ರಗಳಲ್ಲಿ ನುರಿತ ತಜ್ಞರು, ಶಿಕ್ಷಕರಿದ್ದಾರೆ.   ಪ್ರತಿಯೊಬ್ಬರೂ ಗುರುವಿನ ಮೂಲಕ ಕಲಿಯಬೇಕು. ಎಲ್ಲವೂ ಎಲ್ಲರೂ ಮಾಡಲು ಎಲ್ಲ ಹಂತದಲ್ಲೂ ಸಾಧ್ಯವಿಲ್ಲ. ತಮಗೆ ಬೇಕಾದಷ್ಟನ್ನು ಕಲಿತು ದಿನವೂ ನಿಯಮಗಳೊಂದಿಗೆ ಅಭ್ಯಸಿಸಿದರೆ ನೆಮ್ಮದಿಯಲ್ಲಿ ಬದುಕಲು ಸಾಧ್ಯ.  
              ಯೋಗವನ್ನು ಎಲ್ಲ ವಯೋಮಾನದವರೂ ಕಲಿತು ಮಾಡಬಹುದು. ದೈಹಿಕ,ಮಾನಸಿಕವಾಗಿ ಸದೃಢರಾಗಬಹುದು. ದೇಹೋ ದೇವಾಲಯ: ಪ್ರೋಕ್ತ: ಸ ಜೀವ : ಶಿವ: | ಎಂದು ಮೈತ್ರೇಯ್ಯುಪನಿಷತ್ ನಲ್ಲಿ ಹೇಳಿರುವಂತೆ ದೇಹವೇ ದೇವಾಲಯ, ದೇಹದಲ್ಲಿರುವ ಜೀವವೇ ಮಂಗಳವನ್ನುಂಟುಮಾಡುವ ದೇವರು. ದೇಹವನ್ನು ಮನಸ್ಸನ್ನು ಆರೋಗ್ಯವಾಗಿರಿಸಿಕೊಂಡು ನಮ್ಮನ್ನು ನಾವು ಅರಿಯುವ ಪ್ರಯತ್ನ ಮಾಡುತ್ತಾ ಜೀವನದ ಗುರಿ ಸಾಧಿಸುವುದು ನಮ್ಮೆಲ್ಲರದಾಗಿರಲಿ. ಬೆಳಕಿನಿಂದ ಬೆಳಕನ್ನು ಪಡೆದು ಬೆಳಕಿನತ್ತ ಸಾಗೋಣ. ಇಂದು ಅಂತರಾಷ್ಟ್ರೀಯ ಯೋಗ ದಿನವನ್ನು  ಆಚರಿಸಲ್ಪಡುತ್ತಿರುವುದು ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆಯ ವಿಷಯ. ನಮ್ಮ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ವಿಶ್ವ ಸಂಸ್ಥೆಯ ಮಹಾಸಭೆಯಲ್ಲಿ  ಯೋಗದ ಮಹತ್ವವನ್ನು ತಿಳಿಸಿ ‘ಭಾರತದ ಪುರಾತನ ಸಂಸ್ಕೃತಿಯ ಅಮೂಲ್ಯ ಕೊಡುಗೆ.ಇದು ಮನಸ್ಸು ಮತ್ತು ದೇಹದ ಒಗ್ಗೂಡುವಿಕೆ,ಆಲೋಚನೆ ಮತ್ತು ಕ್ರಿಯೆಗಳನ್ನೊಳಗೊಂಡಿದೆ. ಯೋಗ ಎಂದರೆ ವ್ಯಾಯಾಮವಲ್ಲ  ವಿಶ್ವದೆಲ್ಲೆಡೆ  ಒಂದಾಗಿ ನಿಸರ್ಗದೊಡನೆ ಗುರುತಿಸಿಕೊಳ್ಳುವಿಕೆ. ಪ್ರಕೃತಿ-ಮಾನವನ ನಡುವೆ ಸೌಹಾರ್ದ ತರುವ ಮತ್ತು ಸರ್ವಾಂಗೀಣ ದೃಷ್ಟಿಯ ಆರೋಗ್ಯ ಪದ್ಧತಿಯಾಗಿದೆ.ಜೀವನಶೈಲಿಯಲ್ಲಿ ಬದಲಾವಣೆಯೊಂದಿಗೆ ಅರಿವನ್ನು ಹೆಚ್ಚಿಸುವುದು.ಹವಾಮಾನ ಬದಲಾವಣೆಗೆ ಒಗ್ಗಿಕೊಳ್ಳಲು ಸಹಕಾರಿಯಾಗಿದೆ. ನಾವು ಯೋಗ ದಿನಾಚರಣೆಯನ್ನು ಅಂತರಾಷ್ಟ್ರೀಯ ಯೋಗದಿನವನ್ನಾಗಿ ಆಚರಿಸಲು ಪ್ರಯತ್ನಿಸೋಣ ‘  ಎಂದು ಹೇಳಿದಾಗ ವಿಶ್ವಸಂಸ್ಥೆ ಸಮ್ಮತಿಸಿ    ಜಗತ್ತಿನ 192 ರಾಷ್ಟ್ರಗಳಲ್ಲಿ  ಅಂತರಾಷ್ಟ್ರೀಯ ಯೋಗ ದಿನಾಚರಿಸಲು ಕರೆ ನೀಡಿದ್ದು 177 ರಾಷ್ಟ್ರಗಳು ಸಹ ಪ್ರಾಯೋಜಕರಾಗಲು ಮುಂದೆ ಬಂದಿರುವುದು ಸುಯೋಗವೇ ಸರಿ.
          2015 ಜೂನ್ 21 ರಂದು ದಕ್ಷಿಣಾಯನದ ಆರಂಭ ದಿನ ( ಅತ್ಯಂತ ಹೆಚ್ಚು ಹಗಲಿರುವ ದಿನ )ಯೋಗ ದಿನಾಚರಣೆಯನ್ನು   ಆಚರಿಸುವ ಸುಸಂದರ್ಭದಲ್ಲಿ ಯೋಗ ಪಿತಾಮಹ ಪತಂಜಲಿ ಮಹರ್ಷಿಗಳಿಗೆ ಭಕ್ತಿಪೂರ್ವಕ ನಮನಗಳು. ವಿಶ್ವದೆಲ್ಲೆಡೆ ಯೋಗದಿಂದ ಆರೋಗ್ಯ ಪಡೆಯೋಣ. ನೆಮ್ಮದಿಯ ಬದುಕು ಎಲ್ಲರಿಗೂ ಸಿಗುವಂತಾಗಲಿ.
ಮಮತಾ ದೇವ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು