fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ _____ ಕೂ ವಿಸ್ಮಯ
🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಶುಕ್ರವಾರ, ಆಗಸ್ಟ್ 29, 2014

ಗಣೇಶ








               ಭಾರತದ ದೇವತಾಶಾಸ್ತ್ರದಲ್ಲಿ , ಇಂದಿಗೆ ಹಿಂದೂ ಧರ್ಮದಲ್ಲಿ ಪ್ರಚಲಿತವಿರುವ, ಸಂಸ್ಕೃತ ಸಾಹಿತ್ಯಗಳಲ್ಲಿ ಉಲ್ಲೇಖೀಸಲ್ಪಡುವ ದೇವತೆಗಳನ್ನು -1. ವೈದಿಕ ಅರ್ಥಾತ್‌ ಋಗ್ವೇದ, ಯಜುರ್ವೇದ, ಸಾಮವೇದ ಹಾಗೂ ಅಥರ್ವ ವೇದಗಳಲ್ಲಿ ನೇರವಾಗಿ ಹೇಳಲ್ಪಟ್ಟಿರುವ ದೇವತೆಗಳು. 2. ಪುರಾಣೋಕ್ತ (ವೈಷ್ಣವ, ಶೈವ-ಶಾಕ್ತ, ಮತ್ತು ಗಾಣಪತ್ಯ) ಮತ್ತು 3. ಪುರಾಣ -ಆಗಮೋಕ್ತ (ಪುರಾಣ ಮತ್ತು ಶೈವ-ಶಾಕ್ತ, ವೈಷ್ಣವ ಆಗಮಗಳೆರಡರಲ್ಲೂ ಹೇಳಲ್ಪಟ್ಟ) ಎಂಬ ಮೂರು ವರ್ಗಗಳಾಗಿ ಗುರುತಿಸಬಹುದು.

               ಇಂದ್ರ, ಅಗ್ನಿ , ಮರುತ್ತುಗಳು, ಪ್ರಜಾಪತಿ, ರುದ್ರ-ಶಿವ, ವಿಷ್ಣು, ಶಚೀ, ವಾಗಂಭ°ಣೆ ಮಿತ್ರ, ಸೂರ್ಯ- ಇತ್ಯಾದಿ ದೇವತೆಗಳು ನೇರವಾಗಿ ನಿರ್ದಿಷ್ಟ ಸೂಕ್ತಗಳ ಮೂಲಕ ವೇದಸಾಹಿತ್ಯದಲ್ಲಿ ಹೇಳಲ್ಪಟ್ಟ ದೇವತೆಗಳು. ಋಗ್ವೇದದಲ್ಲಿ ಗಣಪತಿಯು ಹೇಳಲ್ಪಟ್ಟಿರುವನಾದರೂ, ಅದು ಬೃಹಸ್ಪತಿ-ಬ್ರಹ್ಮಣಸ್ಪತಿಗೆ  (ಋ. 2.23.1) ಅಥವಾ ಇಂದ್ರನಿಗೆ (ಋ. 8.81) ಮತ್ತೂಂದೆಡೆ "ಗಣೇಶಾನ' ಎಂದು ಶಿವನಿಗೆ ವಿಶೇಷಣವಾಗಿ ಅನ್ವಯಿಸುವ ಪದ. ಅದು ನಾವಿಂದು ನಂಬಿರುವ ವಕ್ರತುಂಡ, ಗಜಾನನನಾದ ಶಿವ-ಪಾರ್ವತಿಯರ ಪುತ್ರ ಗಣಪತಿಯಲ್ಲ. ಗಣಾನಾಂತ್ವಾ ಗಣಪತಿಂ... ಎನ್ನುವ ಸೂಕ್ತ "ಕವಿ, ಜ್ಯೇಷ್ಠರಾಜ, ಬ್ರಹ್ಮಣಾಂ ಬ್ರಹ್ಮಣಸ್ಪತಿ'ಯೆಂದು ಬೃಹಸ್ಪತಿಗೆ ಸಂಬಂಧಿಸಿದ್ದು. ಅದೇ ರೀತಿ ಋ. 8.81ರ ಸೂಕ್ತ ಆತೂನ ಇಂದ್ರಕ್ಷುಮಂತಂ... ಅನ್ನುವ ಇಂದ್ರನ ಕುರಿತಾದದ್ದು. ಋಷಿಗಣದ ರಾಜ (ಋಕ್ವತ್ತುಗಳ) ಬ್ರಹ್ಮಣಸ್ಪತಿ. 


                     ಮರುತ್ತುಗಳ ಗಣರಾಜ ಇಂದ್ರ. ಒಂದು ಗಣವು ಏಳು ಸಂಖ್ಯೆಯುಳ್ಳದ್ದೆನ್ನುವ ಅರ್ಥದಲ್ಲಿ ಋಗ್ವೇದದಲ್ಲಿ ಬಳಸಲಾಗಿದೆ. ಸಪ್ತ ಮರುತ್ತು (ಇದು ಪ್ರಾಚೀನ ಬ್ಯಾಬಿಲೋನ್‌, ಈಜಿಪ್ತ್ , ಗ್ರೀಕ್‌ ಪುರಾಣಗಳಲ್ಲೂ ಹೇಳಲ್ಪಟ್ಟಿದೆ)ಗಳ ಅಧಿಪತಿ ಇಂದ್ರ. ದೇವತೆಗಳ ರಾಜ ಬ್ರಹ್ಮಣಸ್ಪತಿ. ಅದೇ ರೀತಿ ರುದ್ರನೂ ಮರುತ್ತುಗಳ ಗಣದ ಪತಿಯಾದ, "ಈಶಾನ'-"ಗಣೇಶಾನ'. ಇದು ಬಿಟ್ಟರೆ ರುದ್ರಪುತ್ರನಾದ "ಗಜಾನನ' - ಗಣೇಶಾನ ವೇದಗಳಲ್ಲಿ ಕಾಣುವುದಿಲ್ಲ. ಪ್ರಾಚೀನ ಬ್ಯಾಬಿಲೋನಿನ ಹಮ್ಮುರಬಿ (ಕ್ರಿ. ಪೂ. 2600)ಯ ಕಾಲದ ಮರುತ್ತುಗಳ ದೇವತೆ "ಮರ್ಧುಕ್‌' (ಮುಂದಕ್ಕೆ ರೋಮನರ ದೌÂ-ಪಿತರ = "ಜ್ಯುಪಿಟರ್‌' ಏಳು ಪ್ರಚಂಡ ಮಾರುತರುಗಳ ಅಧಿಪತಿ)ನಿಗೆ ಸಮಾನವಾದ ಭಾರತದ ಜ್ಯುಪಿಟರ್‌ ಬ್ರಹ್ಮಣಸ್ಪತಿ = ಬೃಹಸ್ಪತಿ.
                      ಗಜಾನನನ ಕಲ್ಪನೆಯೇ ವೇದೋತ್ತರ ಕಾಲದ್ದು. ಆದರೆ, ಮುಂದಿನ ಗಜಾನನ ಗಣಪತಿಗೆ ಸಲ್ಲುವ ಅನೇಕ ಲಕ್ಷಣಗಳು ಋಗ್ವೇದದ ಗಣಪತಿಯಲ್ಲೂ ಕಾಣಬಹುದು-ಕವಿ, ವಿಪ್ರತಮ, ಜ್ಯೇಷ್ಠರಾಜ, ಪರಶುಧಾರಿ, ಸ್ವರ್ಣಕಾಂತಿ ಶರೀರದವ, ಬೃಹತ್‌ ಶರೀರಿ. ಇವಲ್ಲದೆ ಇತರ ವಿಶೇಷಣಗಳೆಂದರೆ - ದೇವಪುರೋಹಿತ, ಋಕ್ವತ್ತುಗಳ ಗಣದ ಮುಖ್ಯಸ್ಥ , ಇಂದ್ರಸಖ, ಇಂದ್ರನ ಒಟ್ಟಿಗಿರುವವ =ಇಂದ್ರಯುಜಾ = ಅವನೊಡನೆ ಸೋಮಪಾನ ಮಾಡುವವ (2. 23.18), ಇಂದ್ರನಂತೆ ವಜ್ರಿಣಃ (ಋ. 1.40. 8), ದೇವತೆಗಳಲ್ಲಿ ದೇವತಮ (2.24.3), ಸ್ತುತಿಸದವರನ್ನು ನಿಗ್ರಹಿಸುವವ (2. 25.1, 2.23.4) ಇತ್ಯಾದಿ. ಹೀಗಾಗಿ, ಈತ ಬ್ರಹ್ಮಣಸ್ಪತಿಯಾದ ಬೃಹಸ್ಪತಿಯೇ ಆಗಿದ್ದಾನೆಂಬ ಅರ್ಥ ಬರುತ್ತದೆ. ಅಂದಿನ ಯಜ್ಞಯಾಗಾದಿಗಳಲ್ಲಿ ಯಜ್ಞವೇದಿಯ ಬಳಿ ಪೀಠಸ್ಥನಾಗಿ, ಜಾತವೇದ ಅಗ್ನಿಯ ಸಮೀಪದಲ್ಲಿ ಪ್ರಥಮಪೂಜ್ಯನಾಗಿ, ಪೂರ್ವಭಾಜ್ಯನಾಗಿ ಪರಿಗಣಿಸಲ್ಪಡುವವನು. ಶೌನಕರು ಬ್ರಹದ್ದೇವತಾದಲ್ಲಿ "ಬೃಹತ್ತಾದ ಸ್ವರ್ಗಾಂತರಿಕ್ಷವನ್ನು ತನ್ನ ಶ್ರೇಷ್ಠವಾದ ಕರ್ಮದಿಂದ ರಕ್ಷಿಸುವವ' ಎಂದು ಅರ್ಥ ನೀಡುತ್ತಾರೆ. ಅಲ್ಲದೆ, ವಾಕ್ಕೇ ಬ್ರಹ್ಮ, ಸತ್ಯವೇ ಬ್ರಹ್ಮ , ಸಮಸ್ತ ಪ್ರಪಂಚವೂ ಬ್ರಹ್ಮವೇ ಆಗಿರುವುದು. ಬ್ರಹ್ಮ ಸ್ವರೂಪವಾದ ಇವೆಲ್ಲವನ್ನು ರಕ್ಷಿಸುವವನೇ "ಬ್ರಹ್ಮಣಸ್ಪತಿ' ಎಂದೂ ಹೇಳುತ್ತಾರೆ (ಬ್ರಹ್ಮವಾ ಬ್ರಹ್ಮ ಸತ್ಯಂ... ಪಾತಾರಂ ಬ್ರಹ್ಮರಾಸ್ತೇನ). ಹೀಗಾಗಿ, ಪ್ರಜಾಪತಿ ಬ್ರಹ್ಮನೇ ಈತನೆಂಬ ಅರ್ಥವನ್ನದು ಸೂಚಿಸುತ್ತದೆ. ಹೀಗಾಗಿಯೇ ಆತನನ್ನು ಮುಂದಿನ ಗಣೇಶ ಪುರಾಣ, ಮುದ್ಗಲ ಪುರಾಣ, ಅಥರ್ವಶೀರ್ಷ ಉಪನಿಷತ್ತುಗಳು ಪರಬ್ರಹ್ಮನಾಗಿ ವರ್ಣಿಸಲು ಆಧಾರವಾಗಿ ಬಳಸಿಕೊಂಡಿವೆ. ಇವುಗಳ ಪ್ರಕಾರ ಗಣೇಶನೊಬ್ಬ ದೇವತೆ ಮಾತ್ರವಲ್ಲ- ದೇವಾಧಿದೇವ-ಪರಬ್ರಹ್ಮನಾಗುತ್ತಾನೆ. ಪ್ರಾಕಾರ ದೇವತೆಯಲ್ಲ ,  ಪ್ರಧಾನ ದೇವತೆಯಾಗುತ್ತಾನೆ- ದೇವಾಲಯದಲ್ಲಿ.

ಶುಕ್ಲಾಂಬರಧರಂ ವಿಷ್ಣುಂ...

                     ಋಗ್ವೇದ ಮಂಡಲ 4. 50ರಲ್ಲಿ ಇಂದ್ರನ ಜತೆ ಬೃಹಸ್ಪತಿಯ ಸ್ತುತಿಯಿದೆ. ಆತ ಋಕ್ವತ್ತುಗಳ ಪತಿ (ಋಕ್ವತಾ ಗಣೇನ ವಲಂ). ಪೂರ್ವಭಾಜ (ವಂದತೇ ಪೂರ್ವಭಾಜಂ) ಇಂದ್ರನ ಜತೆ ಸೋಮಪಾನ ಮಾಡುವಾತ (ಇಂದ್ರಶ್ಚ ಸೋಮಂ ಪಿಬತಂ). ಋ. 8.96ರಲ್ಲಿ ಇಂದ್ರಾಬೃಹಸ್ಪತಿಯರ ಸ್ತುತಿ. ಇಂದ್ರ ವೃತ್ತನನ್ನು ಕೊಲ್ಲಲು ತ್ರಿಷಷ್ಟಿ  (63) ಮರುತ್ತುಗಳ ಜತೆ ವಜ್ರಬಾಹುವಾಗಿ ಹೊರಡುವುದನ್ನು ಹೇಳುತ್ತದೆ. ಇಲ್ಲಿ ಮರುತ್ತುಗಳ ಒಡೆಯ ಇಂದ್ರನೇ ಬೃಹಸ್ಪತಿಯೂ ಆಗಿದ್ದಾನೆ. ಆತನೇ ವೃತ್ರನನ್ನು ವಧಿಸಿ ಶುಷ್ಕತೆಯನ್ನು ಹೋಗಲಾಡಿಸಿ, ಸ್ವರ್ಗಾಂತರಿಕ್ಷವನ್ನು ಪಾಲಿಸುವಾತ. ಮುಂದಕ್ಕೆ ಈ 63 ಮರುತ್ತುಗಳು ವೀರಶೈವ ದರ್ಶನದಲ್ಲಿ 63 "ವಿರಕ್ತ ಪುರಾತನ'ರಾಗುವುದನ್ನು ಜೈನರಲ್ಲಿ 63 ಶಲಾಕಾ ಪುರುಷರಾಗುವುದನ್ನು ಕಾಣುತ್ತೇವೆ. ವೈಷ್ಣವ ಪಾಂಚರಾತ್ರದಲ್ಲಿ ಶುಕ್ಲಾಂಬರಧರಂ ವಿಷ್ಣುಂ ಎನ್ನುವ ಮೂಲಕ ಸ್ತುತಿಸಲ್ಪಡುವ ಗಣಪತಿಯು ಆದಿತ್ಯರೂಪಿ. ಆದಿತ್ಯನೇ ಮೂಲನಾರಾಯಣ- ಗಣಪತಿ. ಆದಿತ್ಯನ ಸಪ್ತವರ್ಣಗಳು ಒಟ್ಟಾಗಿ, ಒಂದಾಗುವ ಶುಕ್ಲ  (ಬಿಳಿ), ಅಂಬರ (ಆಕಾಶ) ಧರ, ವಿಷ್ಣು (ಸರ್ವವ್ಯಾಪಿ).

                   ನಿಷುಸೀದ ಗಣಪತೇ ಗಣೇಶುತ್ವಾ... ಚಿತ್ರಮರ್ಚ- ಎನ್ನುವ ಇಂದಿನ ಗಣಪತಿಯ ಪ್ರಧಾನ ವೇದಸೂಕ್ತ, ಇಂದ್ರನಿಗೇ ಅನ್ವಯಿಸುವುದು. ಋಗ್ವೇದದಲ್ಲಿ ಗುಂಪಾಗಿರುವುದು ಗಣವೆನಿಸುತ್ತದೆ. ಆದಿತ್ಯರು, ರುದ್ರರು, ವಸುಗಳು, ಮರುತ್ತುಗಳು, ವಿಶ್ವೇದೇವರುಗಳು, ಆಭಾಸ್ಪರರು, ಅನಿಲರು, ಸಂಧ್ಯಾದೇವತೆಗಳು, ಮಹಾರಾಜಕರು, ತುಷಿತರು - ಇತ್ಯಾದಿ. ಹಾಗಾಗಿ, ಋಗ್ವೇದದ ಗಣಪತಿಯು ಈ ಅರ್ಥದಲ್ಲಿ ಇಂದ್ರ, ಬ್ರಹ್ಮಣಸ್ಪತಿಯಲ್ಲದೆ, ಮುಂದಿನ ಪುರಾಣಗಳ ವಿನಾಯಕ, ವಿಘ್ನಕರ್ತ, ವಿಘ್ನಹರ್ತ, ವಕ್ರತುಂಡ, ಗಜಾನನನಲ್ಲ. ಶಿವಪುತ್ರನಲ್ಲ. ಆದರೆ, ಮುಂದಕ್ಕೆ ಕ್ರಿ. ಶ. 5-6ನೇ ಶತಮಾನಕ್ಕೆ, ಭಾರತೀಯ ಮತ್ತು ಯವನರ ಜ್ಯೋತಿಶಾÏಸ್ತ್ರವು ಆರ್ಯಭಟ, ವರಾಹಮಿಹಿರರೇ ಮುಂತಾದವರ ಮೂಲಕ ವಿಸ್ತರಿಸಿದುದರ ಪರಿಣಾಮವೋ ಏನೋ, ಬ್ರಹಸ್ಪತಿಯು ತನ್ನ ವೈದಿಕಯುಗದ ಲಕ್ಷಣಗಳನ್ನು ಕಳೆದುಕೊಂಡು, ರೋಮಕ (ರೋಮನ್‌) ಸಿದ್ಧಾಂತದ ಅತ್ಯಂತ ದೊಡ್ಡ ಆಕಾಶಕಾಯ - "ಜ್ಯುಪಿಟರ್‌' (ದೌÂ-ಪಿತರ)ನಾಗಿ ಬಿಡುತ್ತಾನೆ.

                      ತೈತ್ತಿರೀಯ ಬ್ರಾಹ್ಮಣದಲ್ಲಿ ಮರುತ್ತುಗಳೂ ಗಣಪತಿಗಳು (ಮರುತೋ ಗಣಾನಾಂ ಪತಯಃ). ಗಣಪತಿ ಇಲ್ಲಿ ಗೌರೀತನಯನಲ್ಲ. ಅದುವರೆಗೆ "ಗೌರಿ', "ಪಾರ್ವತಿ', "ಉಮಾ' ಕಾಣುವುದಿಲ್ಲ. ಬದಲಾಗಿ ಅಲ್ಲಿರುವುದು ವಾಗಂಭೃಣಿ, ಅದಿತಿ ಮತ್ತು ಶಚಿ ಅಥವಾ ಅಥವಾ ಇಳಾ, ಭಾರತೀ, ಸರಸ್ವತೀ = ತಿಸ್ರೋದೇವ್ಯಃ. ಗೌರಿಯು ಕಾಣಿಸಿಕೊಳ್ಳುವುದು ವಾಜಸನೇಯಿ ಸಂಹಿತೆ, ಶತರುದ್ರೀಯ ಮುಂತಾದ ಅನಂತರದ ಕಾಲದಲ್ಲಿ. ಗೌರಿಯು ವೇದದ ನಿಕೃತಿಗೆ ಸಮಾನ ಕಲ್ಪನೆ. ಗ್ರೀಕರ ಆರ್ತೆಮಿಸ್‌, ಲೂನಾ, ಲೋನಾ, ನೋನಾ, ನಾನದೇವಿಯರಿಗೆ (ಪಾಶ್ಚಾತ್ಯ) ಸಮಾನವಾದ ಕಲ್ಪನೆಯೂ ಹೌದು. ಆಕೆ ಎಲ್ಲ ದುರಿತಗಳ ತಾಯಿ. ಗೌರಿಯ ಪುತ್ರ ಗಣೇಶ ಎಲ್ಲ ದುರಿತಗಳನ್ನು ತಂದೊಡ್ಡುವವ = ವಿಘ್ನಕರ್ತ. ಇವುಗಳ ನಿವಾರಣೆಗೆ ಗೌರಿ-ಗಣೇಶಗಳ ಸಂತೈಸುವಿಕೆ, ಪೂಜಿಸುವಿಕೆ. ಪೂಜಿಸಿದ ಬಳಿಕ ವಿಸರ್ಜನ. ಪೂಜಿಸಿ ವಿಸರ್ಜಿಸುವ ಈ ಕ್ರಮ, ದಕ್ಷಿಣಭಾರತದ ವೈದಿಕಕಲ್ಪನೆಯ ಹೊರನಿಲ್ಲುವ ಆಚರಣೆ. ಮಾರಮ್ಮ , ಮಾಸೋಬಾ ಇತ್ಯಾದಿ ದೇವತೆಗಳನ್ನು ಪೂಜಿಸಿ ವಿಸರ್ಜಿಸುವಂತೆ. ಗಣೇಶನೂ ಪ್ರಧಾನವಾಗಿ ದಕ್ಷಿಣಭಾರತದ ಮೂಲದಲ್ಲಿ ಆಯೇìತರ ದೇವತೆಯಾಗಿದ್ದು ಪೂಜಿಸಿ ವಿಸರ್ಜಿಸಲ್ಪಡುವವನು.

ಶರಣು ಸಿದ್ಧಿವಿನಾಯಕ...

                      ಸೂತ್ರಗಳ ಕಾಲದಲ್ಲಿ ವಿನಾಯಕನಿದ್ದಾನೆ. ಕ್ರಿ.ಪೂ. 1ನೇ ಶತಮಾನದ ಪತಂಜಲಿ, ಅದರ ಮೊದಲ ಮೌರ್ಯರ ಕಾಲದಲ್ಲಿ ವಿಗ್ರಹಗಳ ಬಗ್ಗೆ ಹೇಳುವಾಗ ಶಿವ-ಸ್ಕಂದ-ವಿಶಾಖರ ಉಲ್ಲೇಖವಿದ್ದರೂ, ಗಣೇಶ ಇಲ್ಲ. ಹಾಗಾಗಿ, ಪುರಾಣಗಳಲ್ಲಿ ಗಣೇಶ ಶಿವನ ಹಿರಿಯ ಮಗನಾದರೂ, ಇತಿಹಾಸದಲ್ಲಿ ಸ್ಕಂದನೇ ಮೊದಲು ಕಾಣಿಸಿಕೊಳ್ಳುವವನು. ಆದರೆ, ವಿಘ್ನ-ವಿನಾಯಕನಿದ್ದ . ಬೌಧಾಯನ ಸೂತ್ರದಷ್ಟು ಪ್ರಾಚೀನಕ್ಕೆ ಈತನನ್ನು ರುದ್ರಪುತ್ರನಾಗಿ ಕಾಣಬಹುದು. ಆದರೆ ಒಂದಲ್ಲ, ಎಂಟು ರುದ್ರರಿಗೆ ಎಂಟು ವಿನಾಯಕ ಪುತ್ರರು. ವಿನಾಯಕ = ವಿಘ್ನಕಾರಕ. ಇನ್ನೊಂದು ಅರ್ಥ ವಿ+ನಯನ = ದೂರ ಒಯ್ಯುವವನು = ವಿಘ್ನಹರ್ತ. ಮೊದಲಲ್ಲಿ ವಿಘ್ನಕರ್ತನೆಂದೇ ಈತನನ್ನು ತಿಳಿದದ್ದು. ಎರಡನೆಯ ಅರ್ಥ ಕ್ರಿ. ಶ. ದ 4-5ನೇ ಶತಮಾನದ ಕಾಲದಲ್ಲಿ ಸೇರಿಕೊಂಡದ್ದು. ವಿಘ್ನಕರ್ತ ಗೌರೀತನಯನಾಗಿದ್ದ. ವಾಯು ಪುರಾಣ ಅತಿ ಪ್ರಾಚೀನ ಮಾಹಿತಿಗಳ ಆಗರ. ಅದರಲ್ಲಿ ಶಿವಪೂಜೆಯಾಗುತ್ತಿರುವ ಮನೆಮಠಗಳಲ್ಲಿ ವಿನಾಯಕನ ಬಾಧೆಯಿಲ್ಲವೆಂಬ ಉಲ್ಲೇಖವಿದೆ. ಶಿವನು ವಿನಾಯಕ ಬಾಧೆಗೆ ತಡೆಯೊಡ್ಡುವಾತ.

                ಜೈನ ಧರ್ಮದಲ್ಲೂ ವಿನಾಯಕನಿದ್ದಾನೆ. ಆತನೂ ವಿಘ್ನಕರ್ತನೇ. ಅಲ್ಲಿ ಸಿದ್ಧನೆಂದು ಕರೆಯಲ್ಪಡುತ್ತಾನೆ. ಆತ ಸಿದ್ಧಿವಿನಾಯಕನಲ್ಲ. ಜಿನ-ಅರ್ಹಂತನೇ ಸಿದ್ಧ, ಆದಿಪೂಜ್ಯ. ಹಾಗಾಗಿ, ಅಲ್ಲಿ ಅಕ್ಷರಾಭ್ಯಾಸದಲ್ಲಿ ಆತನನ್ನು "ಓಂ ನಮಃ ಸಿದ್ಧಂಗ' ಎಂದು ಸ್ಮರಿಸುವುದು. ಅದು ಗಣಪತಿ- ವಿನಾಯಕನಲ್ಲ. ಇನ್ನು ಬೌದ್ಧರಲ್ಲಿ ಈತ ಹೇರುಕ-ಹೇರಂಭನೆಂಬ ಬುದ್ಧ . ಬುದ್ಧಿ ಅಂದರೆ ಜ್ಞಾನ. ಅಕ್ಷರಜ್ಞಾನದಾತ ಹೇರಂಭ ಬುದ್ಧ , ವಾಕ³ತಿ. ವೃದ್ಧಿ-ಸಿದ್ಧಿ ಪ್ರದಾಯಕ ವಿನಾಯಕ. ಮಹಾಯಾನದ ಬೌದ್ಧರ ಮಂಜುಶ್ರೀ- ಮಂಜುಕಲ್ಪಗಳಲ್ಲಿ ವಿನಾಯಕರೆಂದರೆ ವಿಘ್ನಕಾರಕರೇ.
                  ಒಂದು ರೀತಿಯಲ್ಲಿ ಈ ಬೌದ್ಧರ ಕಲ್ಪನೆಯೇ ಮುಂದಿನ ಪುರಾಣಗಳ ಸ್ಕಂದ-ಕುಮಾರ ಮತ್ತು ಗಣಪತಿಯ ನಡುವಿನ ಅಸೂಯೆ-ಪೈಪೋಟಿಗೆ ಮೂಲವಾಗಿದ್ದಿರಬೇಕು. ಗಣಪತಿ ಸ್ಕಂದನಿಗಿಂತ ಹೆಚ್ಚು ಬುದ್ಧಿವಂತ. ಸ್ಕಂದನಷ್ಟೇ ವೀರನೂ ಕೂಡಾ. ಪಾರ್ವತಿಯ ನೇರ ಪುತ್ರನಲ್ಲ. ದ್ವೆ„ಮಾತರ (ಎರಡು ತಾಯಂದಿರು)ನೆಂಬ ಬಿರುದನ್ನು ಹೊಂದಿದವನು. ವರಾಹ ಪುರಾಣದ ಪ್ರಕಾರ ಶಿವನ ಅಟ್ಟಹಾಸದಲ್ಲಿ ಜನಿಸಿದವ.
ಹೊಂಬಣ್ಣದ ಸುಂದರಕಾಯನಾದ ಇವನನ್ನು ಕಂಡು ಶಿವನ ಮಡದಿ ಮೋಹ ತಾಳಿದಾಗ ಶಿವನು ಈತನನ್ನು ಮತ್ಸರದಿಂದ ಲಂಬೋದರನನ್ನಾಗಿಸಿದನಂತೆ ! ಆನೆಯ ಮುಖದ ಕುರೂಪಿಯಾಗಲು ಶಪಿಸಿದನಂತೆ ! ಬಳಿಕ ಕರುಣೆದೋರಿ, ಕುರೂಪಿಯಾದರೂ ವಿನಾಯಕರ ಗಣದ ಪತಿಯಾಗೆಂದು ಅನುಗ್ರಹಿಸಿದನಂತೆ !

ದ್ವೆ„ಮಾತರ ಗಣಾಧಿಪಃ

ಕ್ರಿಸ್ತಶಕ ಮೊದಲ ಕೆಲವು ಶತಕಗಳ ತನಕ ವಿನಾಯಕನು ಸ್ಕಂದನಿಗಿಂತ ಕೆಳಗಿನ ಸ್ಥಾನದಲ್ಲೇ ಇದ್ದವನು. ತಾರಕಾಸುರ ವಧೆಗೆ ಸೇನಾನಿಯಾಗಿ ಪಡೆದ ಪುತ್ರ ಸ್ಕಂದ-ಕುಮಾರನು ಶಿವನಿಗೆ ಹೆಚ್ಚು ಪ್ರಿಯನಾದವನಾಗಿದ್ದನೆ? ಈ ಸಂದೇಹ ಶಿವ ಗಣಪತಿಯರಿಗೆ ಸಂಬಂಧಿಸಿದ ಅನೇಕ ಪುರಾಣಗಳಲ್ಲಿ ಸೂಚ್ಯವಾಗಿದೆ. ಆದರೆ ಕ್ರಿ.ಶ. 6ನೇ ಶತಮಾನದ ಬಳಿಕ ವಿನಾಯಕ-ಗಣೇಶನು ಸ್ಕಂದನನ್ನು ಹಿಂದಕ್ಕೆ ಸರಿಸಿ, ಪ್ರಥಮಪೂಜ್ಯನಾಗಿ ನಿಲ್ಲುತ್ತಾನೆ. ಉತ್ತರಭಾರತದ ಆದ್ಯಂತ ವಿಷ್ಣು , ಶಿವ, ದುರ್ಗೆಯರ ಅಂತಸ್ತಿಗೆ ಸಮನಾಗಿ ಅದುವರೆಗೆ ಸ್ಥಾನ ಪಡೆದಿದ್ದ ಸ್ಕಂದ ಈಗ ಎರಡನೇ ಸ್ಥಾನಕ್ಕೆ ಸರಿಯುತ್ತಾನೆ. ಗುಪ್ತರ ಕಾಲದವರೆಗೆ ರಾಜರುಗಳ ಹೆಸರುಗಳನ್ನು ಪರಿಶೀಲಿಸಿದರೂ ವಿನಾಯಕ, ಗಣಪತಿ, ಗಣಪತಿಯರಿಲ್ಲ. ಆದರೆ ಕುಮಾರಗುಪ್ತ, ಸ್ಕಂದಗುಪ್ತ, ಕಾರ್ತಿಕೇಯ ಇತ್ಯಾದಿಗಳನ್ನು ಕಾಣಬಹುದು. ಕ್ರಿ. ಪೂ. ದಿಂದ ಹಿಡಿದು ಕ್ರಿ.ಶ. 5ನೇ ಶತಮಾನದವರೆಗೆ ಈಗಿನ ಪಂಜಾಬದ ರೋಹಟಕದಿಂದ ಆಳುತ್ತಿದ್ದ ಯೌಧೇಯರು, ಶಕರಿಂದ ಹಿಡಿದು ಹೂಣರವರೆಗೆ ಹೊರಗಿನ ಆಕ್ರಮಣವನ್ನು ಎದುರಿಸುತ್ತ ಬಂದವರು ತಮ್ಮನ್ನು "ಮತ್ತ ಮಯೂರ'ರೆಂದೇ ಕರೆದುಕೊಳ್ಳುತ್ತಿದ್ದರು. ಸ್ಕಂದ-ಸೇನಾನಿಯೇ ಅವರ ಇಷ್ಟದೇವತೆ. ದಕ್ಷಿಣದ ಮೊದಲ ಅರಸರಾದ ಪಲ್ಲವ-ಕದಂಬರಲ್ಲೂ ಗಜಾನನನ ಹೆಸರಿನವರಿಲ್ಲ.  ಗುಪ್ತರಲ್ಲಿಯೂ ಕುಮಾರಗುಪ್ತ, ಸ್ಕಂದಗುಪ್ತರೆಂಬ ಅರಸರಿದ್ದರು. ಕಾಳಿದಾಸ, ವರಾಹಮಿಹಿರ ಸ್ಕಂದನ ಪ್ರಶಂಸೆ ಮಾಡುತ್ತಾರೆ. ಅವರ ಯಾವ ಕೃತಿಯೂ ಗಣಪತಿಯ ಸ್ತುತಿಯಿಂದ ಆರಂಭವಾಗುವುದಿಲ್ಲ.

                   ಗಣಪತಿಯ ಸ್ತುತಿಯಿಂದ ಆರಂಭವಾಗುವುದು ಭವಭೂತಿ (ಕ್ರಿ.ಶ. 7ನೇ ಶತಮಾನ)ಯಿಂದ. ಮುಂದೆ ಅದು ಎಲ್ಲ ಪ್ರಾದೇಶಿಕ ಭಾಷೆಗಳಿಗೂ ವ್ಯಾಪಿಸುತ್ತದೆ. ಗಣೇಶನ ಸ್ತುತಿಯು ಮೊದಲು ಕಾಣಿಸಿಕೊಳ್ಳುವುದು ಸಂಸ್ಕೃತದ ಮಾಲತೀ-ಮಾಧವದಲ್ಲಿ ಮತ್ತು ಉತ್ತರರಾಮಚರಿತದಲ್ಲಿ. ಮಹಾರಾಷ್ಟ್ರದ ಉತ್ತರ ಭಾಗದವನು ಭವಭೂತಿ. ಆತನಿಂದ ಹಿಡಿದು ಆ ಪ್ರದೇಶದ 13ನೇ ಶತಮಾನದ ಮರಾಠೀ ಸಂತ ಜ್ಞಾನೇಶ್ವರನಿಂದ ಮುಂದೆ ಸಾಗಿ 17ನೇ ಶತಮಾನದ ಕರಾಡದ "ಮೋರಯಪಂತ'- ಹೀಗೆ ಸಾಗುತ್ತದೆ ಗಣಪತಿಯ ಪ್ರಭಾವ. ಈ ಮಹಾರಾಷ್ಟ್ರದ ಹತ್ತಿರದವರಾದ ಬ್ರಾಹ್ಮಣರ ಒಂದು ವರ್ಗ ಗಾಣಪತ್ಯ ಪಂಥವನ್ನು ಅನುಸರಿಸುವವರಾಗಿದ್ದಿರಬೇಕು. ಈ ವರ್ಗಕ್ಕೆ ಸೇರಿದವರೇ ಇಸ್ಲಾಂ ಧರ್ಮ ಸ್ವೀಕರಿಸಿ ಬಹಮನೀ ರಾಜ್ಯ ಸ್ಥಾಪಿಸಿದವರಾಗಿದ್ದಿರಬೇಕು. (ಬಹಮನೀ=ಬ್ರಾಹ್ಮಣ) ಹಾಗಾಗಿ, ಗುಲ್ಬರ್ಗಾದಲ್ಲಿರುವ ಬಹಮನೀ ರಾಜ್ಯದ ಕೋಟೆಯೊಳಗೆ ಇಂದಿಗೂ ಗಣೇಶನ ದೇವಾಲಯ ಉಳಿದು ಕೊಂಡಿದೆ.

                    ಬಹಮನಿಯವರು ಇದನ್ನು ಉಳಿಸಿಕೊಂಡೇ ಕೋಟೆಯನ್ನು ಕಟ್ಟಿಕೊಂಡರು. ಕ್ರಿ. ಶ. ಆರನೆಯ ಶತಮಾನದ ಬಳಿಕ ಗಣೇಶ ಪ್ರಬಲನಾಗುತ್ತಾನೆ. ಆಗ ಸ್ಕಂದ ಹಿಂದಕ್ಕೆ ತಳ್ಳಲ್ಪಡುತ್ತಾನೆ. ಸ್ಕಂದನ ಕಾಲದಲ್ಲಿ ಗಣೇಶ ವಿಘ್ನಗಳನ್ನುಂಟುಮಾಡುವವನು ವಿನಾಯಕ. ವಿನಾಯಕ ಒಬ್ಬನಲ್ಲ - ನಾಲ್ಕು ಅಥವಾ ಎಂಟು ಮಂದಿ ಇದ್ದರು. ಬೇರೆ ಬೇರೆ ಸಾಹಿತ್ಯದಲ್ಲಿ ಬೇರೆ ಬೇರೆ ಕಲ್ಪನೆಯಿದೆ. ಮಾನವಗೃಹ್ಯ ಸೂತ್ರ, ಬೈಜವಾಪ ಸೂತ್ರದಲ್ಲಿ ನಾಲ್ಕು ವಿಘ್ನರು. ಈ ವಿಘ್ನರನ್ನು ಹೊಡೆದೋಡಿಸಿ ರಕ್ಷಿಸುವಾತ "ಮಹಾಕ್ರೋಧ‌'ನಾದ ಸ್ಕಂದ.
ಈ ನಂಬಿಕೆ ಕ್ರಿ. ಶ. 5ನೇ ಶತಮಾನದವರೆಗೂ ಮುಂದುವರಿದಿತ್ತು. ಉದಾ: ಯಾಜ್ಞವಲ್ಕéಸ್ಮತಿಯಲ್ಲೂ ವಿನಾಯಕ ವಿಘ್ನಕಾರಕನೇ. ಪ್ರಾಚೀನ ಬೌಧಾಯನ ಸೂತ್ರದಲ್ಲಿ ಎಂಟು ವಿಘ್ನರು. ಹೇರಂಭ ಎನ್ನುವ ದ್ವಿಭುಜ ಗಣಪತಿಯು ಭವಭೂತಿಯ ಮೂಲಕ ಪ್ರಸಿದ್ಧನಾದ, ಜನಪ್ರಿಯನಾದ. ಪ್ರಾಯಃ ಬೌದ್ಧ ಮೂಲದ ಹೇರಂಭ-ಹೇರುಕನೇ ಮುಂದಕ್ಕೆ ಶೈವಾಗಮದೊಳಗೆ ಸೇರಿಕೊಳ್ಳುತ್ತಾನೆ. ಈತನ ಮೊದಲ ದಾಖಲೆ ಮಹಾಭಾರತದಲ್ಲಿದೆ. ಅಮರಕೋಶದ ಉಲ್ಲೇಖ ಹೀಗಿದೆ :

ವಿನಾಯಕೋ ವಿಘ್ನರಾಜೋ ದ್ವೆ„ಮಾತುರ ಗಣಾಧಿಪಃ |
ಅವ್ಯೇಕದಂತೋ ಹೇರಂಭೋ ಲಂಬೋದರ ಗಜಾನನಃ ||


                     ಮುಂದಕ್ಕೆ ಗಣೇಶಪುರಾಣ, ಮುದ್ಗಲಪುರಾಣಗಳ ಮೂಲಕ ಈತ ಪ್ರಸಿದ್ಧನಾಗುತ್ತಾನೆ. ಪ್ರಾಯಃ ಕ್ರಿ. ಶ. 10ನೇ ಶತಮಾನದ ಅನಂತರದ ಬೆಳವಣಿಗೆ ಇದು. ಇವುಗಳಿಗಿಂತಲೂ ಅನಂತರದ ಗಾಣಪತ್ಯರ ರಚನೆ ಗಣೇಶ ಅಥರ್ವಶೀರ್ಷ ಉಪನಿಷತ್ತು. ಕ್ರಿ. ಶ. 7ನೇ ಶತಮಾನದ ಬಳಿಕ ಒಂದೊಂದಾಗಿ ಎಲ್ಲ ಶೈವ ಪುರಾಣಗಳೂ ಈತನನ್ನು ಸೇರಿಸಿಕೊಂಡೇ ಸಾಗುತ್ತವೆ. ವೈಷ್ಣವ ಭಾಗವತದ ಕೃಷ್ಣಕತೆಯನ್ನೇ ಹೆಸರು ಬದಲಾಯಿಸಿಕೊಂಡು ರಚಿಸಿದ ಕೃತಿ ಗಣೇಶಪುರಾಣ. ಅಲ್ಲಿ ವಸುದೇವ-ದೇವಕಿ-ಕಂಸ, ತೃಣಾವರ್ತ, ಧೇನುಕ, ಪೂತನಿ, ಶಕಟಾಸುರ-ಮುಷಿ¡ಕ-ಚಾಣೂರ ಇತ್ಯಾದಿ ಎಲ್ಲರೂ ಇಲ್ಲಿ ಬೇರೆ ಹೆಸರಿನಲ್ಲಿ ಕಾಣಿಸಿಕೊಳ್ಳುವರು. ಕೃಷ್ಣನ ಬದಲು ವಿಕಟ ಶಿಶು ಗಣೇಶ. ವಸುದೇವ- ದೇವಕಿಯರ ಬದಲು ಕಶ್ಯಪ-ಅದಿತಿ. ಸಾಕು ತಂದೆ ನಂದಗೋಪನು ಇಲ್ಲಿ ಕಾಶೀರಾಜ. ಕಂಸನ ಬದಲು ನರಕಾಂತಕ. ಪೂತನಿಗೆ ಬದಲು ವಿರಜಾ ರಾಕ್ಷಸಿ, ಮುಷ್ಟಿಕ-ಚಾಣೂರರ ಬದಲು ಉದ್ಧತ-ದುಂಧುರ. ಹೀಗೆ ಒಟ್ಟು ಗಣೇಶ ಪುರಾಣವೇ ಭಾಗವತದ ಪ್ರತಿರೂಪ. ಬಾಲಕೃಷ್ಣನಂತೆ ಬಾಲಗಣೇಶನೂ ಬಾಯಿಯಲ್ಲಿ ಬ್ರಹ್ಮಾಂಡವನ್ನು ತೋರಿಸುತ್ತಾನೆ. ವಿಶ್ವರೂಪದರ್ಶನ ಮಾಡಿಸುತ್ತಾನೆ. ಪ್ರಾಯಃ ನರ್ಮದೆಗಿಂತ ದಕ್ಷಿಣದ ಮಹಾರಾಷ್ಟ್ರದಲ್ಲಿ ಈ ಪುರಾಣ ಹುಟ್ಟಿಕೊಂಡಿರಬೇಕು. ಜ್ಞಾನೇಶ್ವರನಿಂದ ಹಿಡಿದು ಮಹಾರಾಷ್ಟ್ರದ ಎಲ್ಲ ಸಂತರೂ, ವೈಷ್ಣವರೂ ಸೇರಿದಂತೆ ತಮ್ಮ ಎಲ್ಲ ಕೃತಿಗಳ ಮೊದಲಲ್ಲಿ ಗಣೇಶನನ್ನು ಸ್ತುತಿಸುತ್ತಿದ್ದರು. ಅದೇ ರೀತಿ ವೈದಿಕ ಕರ್ಮಗಳಾದ ಹೋಮಹವನಗಳಲ್ಲಿ ವೇದದ ಬ್ರಹ್ಮಣಸ್ಪತಿಯನ್ನು ಮೊದಲು ಪ್ರಾರ್ಥಿಸುತ್ತಿದ್ದ ಕ್ರಮ, ವಕ್ರತುಂಡ ಮಹಾಕಾಯನ ಸ್ತುತಿಯಾಗಿ ಪರಿವರ್ತಿತವಾದದ್ದು ಕಳೆದ ಒಂದು ಸಾವಿರ ವರ್ಷಗಳಿಂದ !

ವಾತಾಪಿ ಗಣಪತಿಂ ಭಜೆ...

                        ಮಹಾರಾಷ್ಟ್ರದಲ್ಲಿ ಇಂದು ನಾವು ಕಾಣುವ ಗಣೇಶೋ ತ್ಸವದ ಮೂಲಪುರುಷ ಕರ್ಹಾಡ ಮೂಲದ ಮೋರೋಪಂತ. 17ನೇ ಶತಮಾನದಲ್ಲಿ ಈತ ಪುಣೆಯ ಹತ್ತಿರ ಗಣೇಶನ ವಿಗ್ರಹ ಸ್ಥಾಪಿಸಿ ಚತುರ್ಥಿಯಿಂದ ಅನಂತಚತುರ್ದಶಿಯವರೆಗೆ ಪೂಜಿಸಿ ವಿಸರ್ಜಿಸುವ ಸಂಪ್ರದಾಯ ಹುಟ್ಟುಹಾಕಿದವ. ಅಂದಿನಿಂದ ಆ ದೇವಾಲಯದ ಊರು "ಮೋರೆಗಾಮ್‌' ಆಯಿತು. ವಿಸರ್ಜಿಸುವಾಗ ಮರಾಠಿಯಲ್ಲಿ "ಮೋರಯನ ತಂದೆ ಗಣಪತಿಯೇ, ಬೇಗನೇ ಮುಂದಿನ ವರ್ಷ ಬಾ' ಎನ್ನುವ ಒಕ್ಕಣೆ (ಗಣಪತಿ ಬಾಪ್ಪಾ ಮೋರಯಾ | ಪುಡಚಾ ವರ್ಷಾ ಲೌಕರ್‌ ಯಾ |) ಎಂದು ಹಾಡಿ ಕುಣಿಯುವ ಸಂಪ್ರದಾಯ ಮಹಾರಾಷ್ಟ್ರದಾದ್ಯಂತ ಇಂದಿಗೂ ನಾವು ಕಾಣಬಹುದು. ಚಿತ್ಪಾವನ ಪೇಶ್ವೆಯವರ ಮನೆದೇವತೆಯಾಗಿದ್ದ ಗಣೇಶ ಬಾದಾಮಿಯ ಚಾಳುಕ್ಯರಿಗೆ ವಾತಾಪಿ ಗಣಪತಿ. ಗಣಪತಿಯು ಹೀಗೆ ಮುಂದಕ್ಕೆ ಮಹಾರಾಷ್ಟ್ರ , ಉತ್ತರಕರ್ನಾಟಕದಲ್ಲಿ ಅತ್ಯಂತ ಜನಪ್ರಿಯ ದೇವತೆಯಾಗಿ ವಿಘ್ನಕರ್ತನ ಬದಲು ವಿಘ್ನ-ವಿನಾಯಕನಾಗಿ ವಿಜಯನಗರದ ಅರಸರವರೆಗೂ ತನ್ನ ಕೀರ್ತಿಯನ್ನು ವರ್ಧಿಸುತ್ತ ಸಾಗಿದ.

                       ವಿಜಯನಗರದ ಅನಂತರದಲ್ಲಿ ತಮಿಳುನಾಡಿಗೂ ಆತ ತನ್ನ ಜನಪ್ರಿಯತೆಯನ್ನು ಚಾಚಿಕೊಂಡ. ಅತ್ಯಂತ ದೊಡ್ಡ ಗಣಪತಿಯ ವಿಗ್ರಹವಿರುವುದು ತಮಿಳುನಾಡಿನಲ್ಲಿ. ಅಲ್ಲಿಯ ವೈಷ್ಣವರಿಗೆ ಪರದೈವವಾದ ಹರಿಯೇ ಗಣಪತಿ. ನಾರಾಯಣನೇ ಗಣಪತಿ. ಅವರ ವಿದ್ಯಾರಂಭದಲ್ಲಿ ಗಣಪತಿಯನ್ನೇ ಓಂ ನಮೋ ನಾರಾಯಣಾಯ ಎಂದು ಸಂಬೋಧಿಸುತ್ತಾರೆ. "ಹರಿಃ ಶ್ರೀ ಗಣಪತಯೇ' ಎನ್ನುತ್ತಾರೆ. ತುಳುನಾಡಿನಲ್ಲೂ ಲಕ್ಷ್ಮೀಸಮೇತ ನರಸಿಂಹ ರೂಪ ಸಹಿತ ಗಣಪತಿಯು ಮಾಧ್ವರೂ ಸೇರಿದಂತೆ ಅನೇಕರ ಮನೆದೇವತೆಯಾಗಿದ್ದಾನೆ. ನನ್ನದೇ ಭಾರ್ಗವ ಗೋತ್ರದ ತಂತ್ರಿಗಳ ಕುಟುಂಬಕ್ಕೆಲ್ಲ ಇಷ್ಟದೇವತೆಯಾಗಿರುವ ಗಣಪತಿಯು ಲಕ್ಷ್ಮೀಸಮೇತನಾದ ಶಂಖಚಕ್ರಧಾರಿ ನರಸಿಂಹ.

                        ತಮಿಳುನಾಡಿನಲ್ಲಿ ಒಂದು ಹೇಳಿಕೆಯಿದೆ. ಶಿವನು ಬ್ರಾಹ್ಮಣರ ದೇವತೆ, ಮಾಧವ ಕ್ಷತ್ರಿಯರದ್ದು. ಬ್ರಹ್ಮ ವೈಶ್ಯರದ್ದು. ಗಣನಾಯಕ ಶೂದ್ರರದ್ದು. ಆದರೆ ಒಟ್ಟು ಭಾರತದಲ್ಲಿ ಗಣಪತಿಯು ಶೂದ್ರರಲ್ಲಿ ಪ್ರಿಯನಾದರೂ ಬ್ರಾಹ್ಮಣರೂಪದಲ್ಲೇ ಬಿಂಬಿತನಾಗಿದ್ದಾನೆ. ಉತ್ತರಭಾರತದಲ್ಲಿ ಗುಜರಾತಿನಿಂದ ಮೊದಲ್ಗೊಂಡು, ರಾಜಸ್ಥಾನ, ಮಧ್ಯಪ್ರದೇಶದ ಕಡೆ ಗಾಣಪತ್ಯ ಪಂಥದ ಪ್ರಭಾವವಿಲ್ಲದ ಕಾರಣ ಅಲ್ಲಿ ಗಣೇಶನ ಪ್ರಭಾವ ಕಡಿಮೆ. ಹಾಗಾಗಿ, ಗಣೇಶ ಬಹುತೇಕ ದಕ್ಷಿಣಭಾರತದ ದೇವತೆ.

                           ಇಂದು ಗಣೇಶ ಸೃಷ್ಟಿ , ಸ್ಥಿತಿ, ಲಯಗಳಿಗೆ ಕಾರಣೀ ಭೂತನಾದ ಸರ್ವಸ್ಥಿತ, ಸರ್ವಗತ, ಸರ್ವವ್ಯಾಪ್ತನಾದ ಬ್ರಹ್ಮಾಂಡರೂಪಿಯೇ ಆಗಿ, ಇಂದಿಗೆ ಮಹಾಗಣಪತಿಯ ರೂಪದಲ್ಲಿ ಆರಾಧ್ಯನಾಗಿದ್ದಾನೆ. ಮತ್ತೆ ವೇದಕಾಲದ ಬ್ರಹ್ಮಣಸ್ಪತಿ-ಪ್ರಜಾಪತಿಯಾಗಿ, ಭೂಮ್ಯಂತರಿಕ್ಷ ವ್ಯಾಪಿಯಾಗಿ ದೌÂ-ಪಿತರನಾಗಿ, ಬೃಹತ್ಛರೀರನಾಗಿ ಪೂಜಿಸಲ್ಪಡುತ್ತಾನೆ.

ಪದಗಳ ಬಂದ 3

                                                                                                                ಉತ್ತರಗಳು

ಗುರುವಾರ, ಆಗಸ್ಟ್ 28, 2014

ಹುಟ್ಟು ಮತ್ತು ಸಾವು

ಹುಟ್ಟು ಉಲ್ಲಾಸದಿಂದ ಬರುತ್ತದೆ,
ಸಾವು ಅತಿ ಘೋರವಾಗಿ ಕಾಡುತ್ತದೆ,
ಆದರೆ ಇವೆರಡರ ಮಧ್ಯೆ ಸುಖ ದುಃಖಗಳೆಂಬುವು
ಸದಾ ಕಿತ್ತಾಟದಲ್ಲಿ ತೊಡಗಿ ದಾಯಾದಿಗಳಂತೆ ಸೆಣೆಸಾಡುತ್ತ
ಮನುಷ್ಯನ ಮೇಲೆ ಅಧಿಕಾರ ಸಾಧಿಸುತ್ತವೆ.

ನಿಯತ್ತಿನ ಅರ್ಥ

ನೀತಿಗೆಟ್ಟವನಿಗೆ ನಿಯತ್ತಿನ ಅರ್ಥ ಗೊತ್ತಿರುವುದಿಲ್ಲ,
 ಗೊತ್ತಿದ್ದರೂ ಅದು ಅವನಿಗೆ ಅರ್ಥವಾಗುವುದಿಲ್ಲ,
 ಅರ್ಥವಾದರೂ ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ,
 ಸಾಧ್ಯವಾದರೂ ಜನ ಅವನನ್ನು ಸುಲಭವಾಗಿ ನಂಬುವುದಿಲ್ಲ.

ಮಂಗಳವಾರ, ಆಗಸ್ಟ್ 26, 2014

ಸ್ವತಂತ್ರ ಸಿದ್ಧಲಿಂಗ 3

ಅಯ್ಯಾ ಏನೂ ಏನೂ ಇಲ್ಲದಂದು,
ಆದಿಕುಳದುತ್ಪತ್ಯವಾಗದಂದು,
ಚಂದ್ರಧರ ವೃಷಭವಾಹನರಿಲ್ಲದಂದು,
ಕಾಲಸಂಹರ ತ್ರಿಪುರಸಂಹರರಿಲ್ಲದಂದು,
ಕಾಮನ ಭಸ್ಮವ ಪೂಸದಂದು ದೇವಿಯರಿಬ್ಬರಿಲ್ಲದಂದು,
ಹರಿಯ ಹತ್ತವತಾರದಲ್ಲಿ ತಾರದಂದು,
ಬ್ರಹ್ಮನ ಶಿರವ ಹರಿಯದಂದು,
ಇವಾವ ಲೀಲೆಯದೋರದಂದು,
ನಿಮಗನಂತನಾಮಂಗಳಿಲ್ಲದಂದು,
ಅಂದು ನಿಮ್ಮ ಹೆಸರೇನು?
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ?

                                                                -----ಸ್ವತಂತ್ರ ಸಿದ್ಧಲಿಂಗ

ಸ್ವತಂತ್ರ ಸಿದ್ಧಲಿಂಗ 2

ಅನುವನರಿದು ಅನುಭಾವಿಯಾದ ಕಾರಣ
ಸಮ್ಯಗ್ರ ಜ್ಞಾನದಿಂದ ತನ್ನನರಿದು, ತನ್ನನೆ ಶಿವಭಾವವಾಗಿ ಕಂಡು
ಆ ಶಿವಭಾವದಲ್ಲಿ ತನ್ನಹೃದಯವ
ಸಮ್ಮೇಳವ ಮಾಡಿದ ಶರಣನು.
ತಾನೆ ಶಿವನ ಪರಮೈಶ್ವರ್ಯಕ್ಕೆ ಭಾಜನವಾಗಿ
ಸರ್ವಲೋಕವನು ಶಿವನೊಳಗಡಗಿಸಿದನಾಗಿ,
ಆ ಶಿವನ ತನ್ನೊಳಗಡಗಿಸಿ,
ಆ ಶಿವನಲ್ಲಿ ಮನವ ನಿಲಿಸಿ ನೆನೆವುತ್ತಿರಲು
ಆ ನೆನೆವ ಮನಸಿನ ಲಯಕ್ಕೆ ಭಾಜನವಾದಾತ ಶಿವನೆಂದರಿದನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನು.

                                                                       ---     ಸ್ವತಂತ್ರ ಸಿದ್ಧಲಿಂಗ

ಶುಕ್ರವಾರ, ಆಗಸ್ಟ್ 22, 2014

ತಾಯೆ ನಿನ್ನ ಕಂದನಾದೆನಲ್ಲ

ತಾಯೆ ನಿನ್ನ ಕಂದನಾದೆನಲ್ಲ ಎಂಥ ಪುಣ್ಯವೇ
ನಿನ್ನ ಅಮ್ಮನೆಂದು ಕರೆವ ಜೀವ ಏನು ಧನ್ಯವೇ


ನಿನ್ನ ಪಾದ ತೊಳೆಯಲು ಕಾತರಿಸಿದೆ ಕಡಲು
ಕೋಟಿ ಕೋಟಿ ಜೀವಕೆ ರಕ್ಷೆ ನಿನ್ನ ಒಡಲು
ಹಸಿರು ಮುರಿವ ಶಾಲಿವನದ ಸಾಲು ನಿನಗೆ ವಸ್ತ್ರ
ಅಂಬರದಲಿ ಮಿಂಚಿದೆ ನಿನ್ನ ಕೈಯ ಶಸ್ತ್ರ.


ರಾಮಕೃಷ್ಣರನ್ನು ತೊಡೆಯಲಾಡಿಸಿದಾ ಮಾತೆ
ವ್ಯಾಸ ಭಾಸ ಜನಕ ಕಾಳಿದಾಸ ಜನ್ಮದಾತೆ
ರಾಮಾಯಣ ಭಾರತ ನೀನಾಡಿದ ಮಾತು
ಬೆರಗಿನಿಂದ ಆಲಿಸಿದೆ ಲೋಕ ಅವಕೆ ಸೋತು.


ನಿನ್ನ ದಿವ್ಯರೂಪ ತೇಜ ಗಾಂಭೀರ್ಯದ ಭಾವ
ವಿಶ್ವದಲ್ಲೆ ಎಲ್ಲಿದೆ ಇಂಥ ಹಿರಿಯ ಜೀವ
ಪ್ರೀತಿ ಸಹನೆ ಸ್ನೇಹದಲ್ಲಿ ಯಾರು ನಿನಗೆ ಸಮವೆ?
ಅದಕೆ ಕರಗಿ ಗಂಗೆಯಾಯ್ತು ಕೈಲಾಸದ ಹಿಮವೆ.



                                                                           ಕೀಲಿಕರಣ: ಕಿಶೋರ್‍ ಚಂದ್ರ

ಗುರುವಾರ, ಆಗಸ್ಟ್ 21, 2014

ಮೈಸೂರು ಪಾಕ್



ಬೇಕಾಗುವ ಸಾಮಗ್ರಿಗಳು 
  • ಎರಡು ಬಟ್ಟಲು ಕಡಲೇಹಿಟ್ಟು 
  • ಕಾಲು ಕಿಲೋ ತುಪ್ಪ 
  • ನೀರು(ಕಾಲು ಲೋಟ) 
  • ಸಕ್ಕರೆ ಕಾಲು ಕಿಲೋ 
ಮಾಡುವ ವಿಧಾನ 
ಮೊದಲು ಕಡಲೆ ಹಿಟ್ಟನು ಸ್ವಲ್ಪತುಪ್ಪದಲ್ಲಿ ಘಮಘಮ ವಾಸನೆ ಬರುವವರೆಗೂ ಹುರಿಯಿರಿ ಸಕ್ಕರೆಗೆ ನೀರು ಹಾಕಿ ಗಟ್ಟಿ ಎಳೆಪಾಕ ಬರುವಂತೆ ಕುದಿಸಿ ಪಾಕ ಚೆನ್ನಾಗಿ ಎಳೆ ಬಂದಮೇಲೆ ಒಲೆಯಮೇಲಿದ್ದಾಗಲೇ ಅದಕ್ಕೆ ಹಿಟ್ಟನ್ನು ಸುರಿಯಿರಿ ಉಳಿದತುಪ್ಪವನ್ನು ಒಂದೇಸಮನೆ ಹಾಕುತ್ತಾ ತಿರುವುತ್ತಿರಿ ಮಿಶ್ರಣ ಪಾತ್ರೆಯ ತಳ ಬಿಡುವ ಹೊತ್ತಿಹೆ ತುಪ್ಪ ಸವರಿದ ತಟ್ಟೆಗೆ ಸುರಿಯಿರಿ ಐದು ನಿಮಿಷದ ಬಳಿಕ ಚಾಕುವಿನಿಂದ ಬೇಗಾದ ಆಕಾರಕ್ಕೆ ಕತ್ತರಿಸಿ ನಂತರ ಒಂದು ಕಾಗದದ ಮೇಲೆ ಬೋರಲು ಹಾಕಿ ಮೈಸೂರ್ ಪಾಕ ತಾನಾಗೇ ಬಿಡಿಬಿಡಿಯಾಗಿ ಇದ್ದು ತಿನ್ನಲು ಚೆನ್ನ

ಟೊಮೊಟೋ ಬೆಳ್ಳುಳ್ಳಿ ಭಾತ್



ಬೇಕಾಗುವ ಸಾಮಗ್ರಿಗಳು 
  • ಅಕ್ಕಿ1ಪಾವು 
  • ಹಸಿಮೆಣಸಿನ ಕಾಯಿ 8 
  • ಬೆಳ್ಳುಳ್ಳಿ 3 
  • ಗಡ್ಡೆಗಳು ಟೊಮೊಟೋ 5 
  • ಗೋಡಂಬಿ 6-8 
  • ತುಪ್ಪ 1ಚಮಚ 
  • ಉಪ್ಪು 1-2 ಚಮಚ 
  • ಒಗ್ಗರಣೆಗೆ-ಎಣ್ಣೆ 50ಗ್ರಾಂ,
  • ಅರಿಶಿನ 1ಚಿಟಿಕೆ,
  • ಇಂಗು 1ಚಿಟಿಕೆ, 
  • ಸಾಸಿವೆ 1ಚಮಚ,
  • ಉದ್ದಿನಬೇಳೆ 1ಚಮಚ,
  • ಕಡಲೇ ಬೇಳೆ1ಚಮಚ,
  • ಕರಿಬೇವು 3 ಎಳಸು 
ಮಾಡುವ ವಿಧಾನ 
ಅಕ್ಕಿಯನ್ನು ತೊಳೆದು ಉದುರುದುರಾಗಿ (ತುಪ್ಪ ಬೆರೆಸಿ) ಅನ್ನ ಮಾಡಿಕೊಳ್ಳಿ, ತಣ್ಣಗಾಗಲು ಬಿಡಿ ಬೆಳ್ಳುಳ್ಳಿ ಸಿಪ್ಪೆಬಿಡಿಸಿ,ಮೆಣಸಿನಕಾಯಿ ಸೀಳಿ,ಟೊಮೊಟೋ ಬಿಲ್ಲೆಗಳಾಗಿ ಕತ್ತರಿಸಿಕೊಳ್ಳಿ ದಪ್ಪ ತಲದ ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ ಒಗ್ಗರಣೆ ಮಾಡಿಕೊಳ್ಳಿ ಅದಕ್ಕೆ ಮೊದಲು ಮೆಣಸಿನಕಾಯಿ ನಂತರ ಗೋಡಂಬಿ,ಟೊಮೊಟೋ ಹಾಕಿ ಹಿರಿಯಿರಿ ಬೆಂದ ನಂತರ ಅರಿಶಿನ ಹಾಕಿ,ಉಪ್ಪು ಸೇರಿಸಿ ಮಿಶ್ರಣ ತಣ್ಣ ನಂತರ ಅನ್ನವನ್ನು ಸೇರಿಸಿ ಕಲಸಿ,ಅಲಂಕಾರಕ್ಕೆ ಕೊತ್ತಂಬರಿ ಸಿಂಪಡಿಸಿ ಬಡಿಸಿ.

ಬುಧವಾರ, ಆಗಸ್ಟ್ 20, 2014

ಚುಕುಬುಕು ರೈಲು

ಚುಕುಬುಕು ರೈಲನು
ನಡೆಸಿದ ಪುಟ್ಟ
ಇಂಧನ ಇಲ್ಲದೆ
ಕಾಲಲಿ ನಡೆದು
ನಿಲ್ದಾಣವ ಸೇರಿ
ಹಿರಿಹಿರಿ ಹಿಗ್ಗಿದ
ಬಸ್ಸನು ಏರಿ
ಸೀಟಲಿ ಕುಳಿತ
ಪೆಟ್ರೋಲ್ ಇಲ್ಲದೆ
ಬಸ್ಸನು ಚಲಿಸಿದ
ಬಾಯಿಯಿಂದಲೇ
ಸದ್ದನು ಮಾಡಿ
ಸಂತಸ ಹೊಂದಿದ
ಡರ್ ಡರ್ ನಾದದಿ
ಟ್ಯ್ರಾಕ್ಟರ್ ಏರಿದ
ಗೇರು ತೆಗೆಯುತ
ಮುಂದಕೆ ಚಲಿಸಿದ
ಓಡುವ ರಭಸಕೆ
ಕೇಕೆಯ ಹಾಕಿದ
ಬುರ್ ಬುರ್ ಶಬ್ದದಿ
ಲಾರಿಯನೇರಿ
ಹಾರನ್ ಹೊಡೆಯುತ
ಮುಂದಕೆ ನಡೆದು
ಎದುರುಬದುರು
ಗಾಡಿಯ ತಡೆದು
ನಿಲ್ಲದೆ ಓಡಿದ
ಟಕ್ ಟಕ್ ಟರ್ರ್ ಟರ್ಸ್
ಎನ್ನುತಲವನು
ಟ್ರ್ಯಾಕ್ಸಲಿ ಕುಳಿತು
ಗೆಳೆಯರ ಕರೆದು
ಓಣಿಯ ಸುತ್ತಿದ
ಕುದುರೆಯ ಹಿಡಿದು
ಜಟಕಾ ಬಂಡಿಯ
ಮೇಲಕೆ ಏರಿ
ಜನಗಳ ಕೂರಿಸಿ
ಓಡಿಸುತದನು
ಮನೆಮನೆ ತಿರುಗಿ
ಸಂಭ್ರಮ ಪಟ್ಟಿಹನು.
          -ಅಕ್ಬರ್ ಸಿ. ಕಾಲಿಮಿರ್ಚಿ

ಮಂಗಳವಾರ, ಆಗಸ್ಟ್ 19, 2014

ಎರಡು ಕಡೆ ಕಾದು ದಾಸಯ್ಯ ಕೆಟ್ಟಂಗಾಗದೆ

        'ಅಲ್ಲಿ ನಿಂತ್ಕಂಡ್ರೆ A, ಇಲ್ಲಿ ನಿಂತ್ಕಂಡ್ರೆ B' ಅಂತೇಳ್ಕಂಡು ದನಗ್ಳು ಮಂತ್ರಿ ಬೆಳ್ಮಗಿಯೋರು ಬೆಳಿಗ್ಗೆ ಬೆಳಿಗ್ಗೆ ಅ ಕಡೆಯಿಂದ ಈ ಕಡೆ ವೋಡಾಡ್ತಾಯಿದ್ರು. 'ಅರೆರೆ, ಮಂತ್ರಿಗ್ಳು ಇದೇನು ಬಾಲ ಸುಟ್ಟಿರೋ ಬೆಕ್ನಂಗೆ ವೋಡಾಡ್ತಾಯಿದ್ದೀರಿ. ಏ ಪಾತ್ರಾಭಿನಯ ನಾಟ್ಕ ಏನರ ಪ್ರಾಕ್ಟೀಸು ಮಾಡ್ತಾಯಿದ್ದೀರ? ಯಾಕೆ ಅಂದ್ರೆ ಅಲ್ಲಿ ನಿಂತ್ರೆ ಇದು, ಇಲ್ಲಿ ನಿಂತ್ರೆ ಅದು ಅಂತಾಯಿದ್ದೀರಲ್ಲ ಅದುಕ್ಕೆ' ಅಂತೇಳಿ ಮೈಲಾರಿ ಯೋಳ್ದ.
           'ಏನಿಲ್ಲ ಮೈಲಾರಿ, ಈ ಪೇಪರ್ದೋರು ಸುಮ್ಕೆ ಬುಡಾದೇಯಿಲ್ಲ. ನೀವು ಯಾವ್ ಪಾರ್ಟಿ, ನಿಮ್ ಲೀಡ್ರು ಯಾರು?  ಅಂತೇಳಿ ಆವಾಗಾವಾಗ ಜೀವ ತಿಂತಾರೆ. B ನಮ್ ಲೀಡ್ರು ಅಂದ್ರೆ Aಗೆ ಕ್ವಾಪ, A ನಂಗೆ ನಾಯ್ಕ ಅಂತಂದ್ರೆ B ಸೆಟಗತರೆ. ಸೆಟಗಂಡ್ರೆ ಪರ್ವಾಗಿಲ್ಲ ಕಣ್ಲಾ. ಮಂತ್ರಿ ಪೋಸ್ಟು ಕಿತ್ಕಂಡ್ರೆ ಏನ್ಲಾ ಮಾಡಾದು. ಬರಿಗೈನಾಗೆ ಬಸ್ ಹತ್ಕಂಡು ವೂರು ಸೇರ್ಬೇಕಾಯ್ತದೆ.
      ಗೂಟದ ಕಾರು, ಆಳುಕಾಳು ಇರಾಕಿಲ್ಲ. ಅದುಕ್ಕೆ ಬೆಣ್ಣೆನಾಗೆ ಕೂದ್ಲು ತಗ್ದಂಗೆ ಮಾತಾಡ್ಬೇಕು. ಅಮ್ಯಾಲೆ ಗಾಳಿ ಬರೋ ಕಡೀಕೆ ತೂರ್ಕಬೇಕು' ಅಂದ್ರು ಬೆಳ್ಮಗಿ ಸಾಹೇಬ್ರು. 'ಪರ್ವಾಗಿಲ್ಲ ಕಣೇಳಿ, ಗಾಂಧಿ ಟೋಪಿ ಹಾಕ್ಕಂಡು ನಾಟ್ಕ ಮಾಡೋದ್ನ ಸರ್ಯಾಗೇ ಕಲ್ತಂಡಿದ್ದೀರಿ. ಯಾವ್ದಾರ ವೊಂದ್ ಕಡ್ಯಾಗೆ ಇದ್ದೋಗಿ. ಅಮೇಕೆ ಎರಡು ಕಡೆ ಕಾದು ದಾಸಯ್ಯ ಕೆಟ್ಟ ಅನ್ನಂಗೆ ಆಬುಟ್ಟಾತು' ಅಂತೇಳಿ ಮೈಲಾರಿ ಯೋಳ್ದ. 'ಅಲ್ಲ, ಮೇವು ಇನ್ನಾ ಅದೆ, ಇನ್ನಾ ಅದೆ ಅಂತ ಟೀವಿನಾಗೆ ಯೋಳ್ತಾ ಇದ್ದಂಗಿತ್ತು.
      ನೀವೆಲ್ಲ ಕೈ-ಬಾಯಿ ಗಲೀಜು ಮಾಡ್ಕಂಡು ಈಪಾಟಿ ತಿಂದ್ರೂನೂವೆ ಮೇವು ಇನ್ನ ಖಾಲಿ ಆಗ್ದೆ ವುಳ್ದೈತಾ?' ಅಂತೇಳಿ ಮೈಲಾರಿ ಕೇಳ್ದ. 'ನಾನು ಯೋಳಿದ್ದು ದನ-ಕರ ತಿನ್ನೋ ಮೇವು ಕಣ್ಲಾ. ಅಲ್ಲಲೇ, ನಾನು ಎಲ್ಲಲಾ ತಿಂದೆ. ತಿನ್ನೋ ಖಾತೆ ಏನರ ನಂಗೆ ಕೊಟ್ಟವ್ರಾ ? ವಯಸ್ಕರ ಶಿಕ್ಷಣ, ಲೈಬ್ರರಿ, ಆಮ್ಯಾಲೆ ದನುಗ್ಳು ಖಾತೆ ಕೊಟ್ಟಿರಾದು. ವೊಂದು ಲೈಬ್ರರಿಗಂಟ ವೋಗಿ ಬುಕ್ಕು ತಿನ್ಕಂಡು ಕೂತ್ಕಬೇಕು. ಇಲ್ಲಾಂದ್ರೆ ದನುಗ್ಳುಗೆ ಹಾಕೋ ಹುಲ್ಲು, ಸೊಪ್ಪು ಸೋದೆ ತಿನ್ಕಬೇಕು ವೋಗಲೇ' ಅಂತೇಳಿ ಬೆಳ್ಮಗಿಯೋರು ಕಾರು ಹಾಕ್ಕಂಡು ಬರ್ ಅಂತ ವೊಂಟೇ ವೋದ್ರು.
     'ಅರೆ ಇರ್ರಿ, ಇರ್ರಿ' ಅಂತ ಮೈಲಾರಿ ಕೂಗುದ್ರೂ ಕೇಳುಸ್ಕಳ್ಳೇ ಇಲ್ಲ. 'ವೊಳ್ಳೇ ಅಸಾಮಿ' ಅಂತೇಳ್ಕಂಡು ಮೈಲಾರಿ ವಿಧಾನಸೌಧ ಮೆಟ್ಲು ಇಳಿತಾಯಿದ್ದಂಗೆ Y ಪಕ್ಸದ ಲೀಡ್ರು ಮೋಟಮ್ನೋರು ಎಂಟ್ರಿ ತಂಗಂಡ್ರು. 'ತುಳ್ದಾಕುದ್ರಪ್ಪ ತುಳ್ದಾಕುದ್ರು' ಅಂತ ವೊಂದೇ ಕಣ್ಣಾಗೆ ಅತ್ಕಂಡು ಬಂದ್ರು. 'ಅರೆ, ಯಾರಕ್ಕ ತುಳ್ದಿದ್ದು, ಯಾವ್ ನೂಕು ನುಗ್ಲಾಗೆ ಸಿಕ್ಕಾಕ್ಕಂಡಿದ್ರಿ ತುಳ್ಯಕ್ಕೆ. ಹೆಂಗೆ ತುಳುದ್ರು ಭಕ್ತ ಕುಂಬಾರ ಪಿಚ್ಚರ್ನಾಗೆ ಅಣ್ಣೋರು ಮಣ್ಣು ತುಳ್ದಂಗಾ ?' ಅಂತೇಳಿ ಮೈಲಾರಿ ಕೇಳ್ದ. 'ಯಾವ್ ಸೀಮೆಯೋನ್ಲಾ ನೀನು ? ಬಡ್ಡೆತ್ತದೆ, ನಿನ್ ಮುಖುಕ್ಕೆ ಮಂಗ್ಳಾರ್ತಿ ಎತ್ತ.
   ನಾನೇಳಿದ್ದು ರಾಜ್ಕೀಯದಾಗೆ ತುಳ್ದಾಕುದ್ರು ಅಂತ' ಅಂದ್ರು ಮೋಟಮ್ನೋರು. 'ವೋಗ್ಲಿ ಬುಡಕ್ಕಾ ರಾಜ್ಕೀಯ ಅಂದ್ರೇನೆ ಹಂಗೆ. ತುಳಸ್ಕಳೋರು ಇರೋಗಂಟ ತುಳಿಯೋರು ಇದ್ದೇ ಇರ್ತರೆ ಅಲ್ವಾ? ಅದೋಗ್ಲಿ, ಈಕಿತ ಎಲೆಕ್ಸನ್ಗೆ ಏನರ ನಿಂತ್ಕತೀರ ಹೆಂಗೆ?' ಅಂತೇಳಿ ಮೈಲಾರಿ ಕೇಳ್ದ. 'ಯಾಕಲೇ ನಾನು ಸಂದಾಕಿರಾದು ನಿಂಗೆ ಹಿಡುಸ್ತಾಯಿಲ್ವಾ? ಏನೋ ನಯಾಪೈಸೆ ಖರ್ಚು ಮಾಡ್ದಂಗೆ ಎಂಎಲ್‌ಸಿ ಆಗೋಗಿದ್ದೀನಿ. ಇನ್ನ ಅಸೆಂಬ್ಲಿ ಎಲೆಕ್ಸನ್ಗೆ ನಿಂತು ವೊಗೆ ಹಾಕುಸ್ಕಂಬುಡ್ಲಾ ?' ಅಂದ್ರು ಮೋಟಮ್ಮ. 'ನೀವೇ ಟೀವಿನಾಗೆ ಯೋಳ್ತಾಯಿದ್ರಿ, ಸೋನಿಯಾ ಮೇಡಮ್ಮು ಯೋಳುದ್ರೆ ನಿಂತ್ಕತೀನಿ ಅಂತ' ಅಂದ ಮೈಲಾರಿ.
      'ಸುಮ್ಕೆ ಹಂಗೇ ಡೈಲಾಗು ಬುಟ್ಟೆ ಕಣ್ಲಾ. ಲೀಡ್ರು ಅಂದ್ಮೇಕೆ ನ್ಯೂಸ್ನಾಗೆ ಇರ್ಬೇಕು ಕಣಲೇ. ಇಲ್ಲಾಂದ್ರೆ ಜನ ಈವಮ್ಮ ಯಾರೋ ಗೊತ್ತಿಲ್ಲ ಅಂತೇಳ್ಬುಡ್ತರೆ' ಅಂದ್ರು ಮೋಟಮ್ಮ.'ನೀವೇಳುದ್ರಿ ಅಂತ ಸೋನಿಯಾ ಮೇಡಮ್ಮು ನಿಂತ್ಕಳಿ ಅಂತಂದ್ರೆ?' ಅಂದ ಮೈಲಾರಿ. 'ಟ್ಯೂಬ್‌ಲೈಟು ಕಣಲೇ ನೀನು. ನನ್ ಹೇಳ್ಕೆ ಬಂದಿರಾದು ಕನ್ನಡ ಪೇಪರ್ರು, ಟೀವಿ ಚಾನೆಲ್ನಾಗೆ. ಸೋನಿಯಾ ಮೇಡಮ್ಗೆ ಕನ್ನಡ ಬತ್ತದಾ? ವೋಗೋಗಲೇ, ಕೋಳಿ ಕೇಳಿ ಯಾರು ಮಸಾಲೆ ಅರೀತರೆ' ಅಂತೇಳಿ ಮೋಟಮ್ನೋರು ವಿಧಾನಸೌಧ ಮೆಟ್ಲು ಹತ್ಕಂಡು ವೋದ್ರು.
                                                                                                                                              - ಕೆ.ವಿ.ಪ್ರಭಾಕರ್