ಅಮ್ಮಾ ನೀ ನನಗೆ ಬೇಕು
ಕತ್ತಿಡಿದು ಕುಯ್ದಷ್ಟು ಸಂಕಟ
ನೆನಪಾದಾಗ
ನಿನ್ನ ಕಳಕೊಂಡ ಕ್ಷಣ
ಇಂದಾದರೂ ಒಮ್ಮೆ ನೀ ಬರಬಾರದೆ!!
ಅಂದು ಮಸಣದ ಹಾದಿ
ಗುಂಟ ನಿನ್ನ ಶವ
ಕಳಿಸಲು ಜನರೊಟ್ಟಿಗೆ ಬಂದೆ
ಅಲ್ಲಿ ಬರೀ
ಸ್ಮಶಾನ ಮೌನ ಅಡಗಿತ್ತು.
ಚಿತೆ ಧಗಧಗನೆ ಉರಿದು
ಕೆನ್ನಾಲಿಗೆ ಕೆಂಪನೆ ನೆಗೆತ
ಆಕಾಶದಲ್ಲಿ
ನೀ ಲೀನವಾಗಿಬಿಟ್ಟೆ
ಸಂಕಟ ಭೂದಿ ಮುಚ್ಚಿದ ಕೆಂಡ.
ಕೈ ತೆರೆಯಂತೆ ಹಿಡಿದು
ದಾಟಿ ಮತ್ತೆ
ಹಿಂದೆ ತಿರುಗಿ ನೋಡಬೇಡಿ
ಅಣತಿಯಂತೆ ಬಂದೆ
ನೀನಿಲ್ಲದ ಆ ಮನೆಗೆ.
ದೇವರಿಲ್ಲದಾಲಯ ಭಣ ಭಣ
ಚಡಪಡಿಸಿದೆ
ಕಣ್ಣೀರು ಹಾಕಿತ್ತು ಶವಾಸನ
ಬಂದು ಹೋಗುವವರ ಸಾಂತ್ವನ
ಆದರೆ ಅದು ನೀನಲ್ಲವಲ್ಲವಮ್ಮಾ.
ಕಾಲ ಸರಿದರೂ
ಕಾವಲಾಗಿ ನಿಂತಿದೆ ನನ್ನೆದೆಯಲ್ಲಿ
ಮಮತೆ ವಾತ್ಸಲ್ಯ
ಮರೆಯಲೊಲ್ಲೆ ದೇಹ
ನಿನ್ನ ಹಾದಿ ಹಿಡಿಯುವವರೆಗೂ!
ಸಿಗದ ತಾರೆ ನೀನು
ಬಾನಲ್ಲಿ ಮಿಣ ಮಿಣ ಮಿಂಚುತ್ತ
ಸ್ವರ್ಗ ಸೇರಿದೆ ಉತ್ತರಾಯಣದಲ್ಲಿ
ಇದೊಂದೇ ಖುಷಿ
ಚಿರ ಮುತ್ತೈದೆ ನನ್ನಮ್ಮ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.